ವ್ಯಾಸಪೂರ್ಣಿಮೆಯಂದು ಬಂದು ಮಹಾಪ್ರಭುಗಳ ಪ್ರಸಾದ

ಗುರುಗಳ ಕರುಣೆಯು ಎನಗಾಯಿತಿಂದು.

ಶ್ರೀವ್ಯಾಸಪೂರ್ಣಿಮೆಯ ದಿನ. ಎಲ್ಲೆಡೆ ಗುರುಪೂರ್ಣಿಮೆಯೆಂದೇ ಪ್ರಸಿದ್ಧ. ಹೌದು. ಜಗತ್ತಿಗೇ ಯಾವತ್ತೂ ಗುರುವಾದ ಶ್ರೀವೇದವ್ಯಾಸರ ಹೆಸರಿನ ಪೂರ್ಣಿಮೆಯಿದು. ವಾಸ್ತವವಾಗಿ ನಾಲ್ಕು ವ್ಯಾಸಪೂರ್ಣಿಮೆಗಳು. ಆಷಾಢ (ಇದೇ ಅತಿ ಹೆಚ್ಚು ಪ್ರಸಿದ್ಧ), ಕಾರ್ತ್ತಿಕ, ಮಾಘ ಮತ್ತು ವೈಶಾಖದ ಪೂರ್ಣಿಮೆಗಳು ವೇದವ್ಯಾಸರ ಹೆಸರಿನ ವಿಶೇಷ ದಿನಗಳು.

ಮಂತ್ರಾಲಯದಲ್ಲಿ ವ್ಯಾಸಪೂರ್ಣಿಮೆ ಬಹಳ ಚೆನ್ನಾಗಿರುತ್ತದೆ. ಮೃತ್ತಿಕೆಯ ಸಂಗ್ರಹ, ಆಷಾಢ ಮಾಸ ಮಹಾತ್ಮ್ಯೆಯ ಪ್ರವಚನ, ಶ್ರೀಮಠದ ಪುರಾಣಿಕರಲ್ಲಿ ಶ್ರೀವೇದವ್ಯಾಸರ ಆವಾಹನೆಯನ್ನು ಮಾಡಿ ಅವರನ್ನು ಪೂಜಿಸುವುದು, ಹಣೆಗೆ ಹಚ್ಚಿಕೊಳ್ಳಲು ವೇದವ್ಯಾಸರಿಗೆ ಸಮರ್ಪಣೆ ಮಾಡಿದ ಅಕ್ಷತೆಯ ವಿತರಣೆ ಹೀಗೆ ಬಹಳ ಸಂಪ್ರದಾಯಬದ್ಧವಾಗಿ ನಡೆಯುತ್ತದೆ ಈ ಹಬ್ಬ. ಇದನ್ನು ಮೆಲುಕು ಹಾಕುತ್ತಲೇ ಇದ್ದಾಗ ಶ್ರೀಮಂತ್ರಾಲಯ ಮಹಾಪ್ರಭುಗಳ ಕರುಣೆಯ ಮಳೆಯೇ ನನ್ನ ಮೇಲೆ ಸುರಿಯಬೇಕೇ?

ಗುರುಗಳ ಕ್ಷೇತ್ರದ ಬಗ್ಗೆ ಚಿಂತಿಸಿದ್ದೇ ಅವರಿಗೆ ಇಷ್ಟವಾಗಿ ಹೋಯಿತು. ಮಹಾತಪಸ್ವಿ ಅಪ್ಪಾ ಅವರು, ಮಹಾಮಹಿಮ ಶ್ರೀವರದೇಂದ್ರಪ್ರಭುಗಳು, ವೇಂಕಟನನ್ನು ಪ್ರಸನ್ನಗೊಳಿಸಿದ ದಾಸರನ್ನು ಮುಂದಿಟ್ಟುಕೊಂಡು ಶ್ರೀಮಂತ್ರಾಲಯ ಪ್ರಭುಗಳು ಮಂತ್ರಾಕ್ಷತೆ, ಗಂಧೋದಕ, ಮತ್ತು ಮೃತ್ತಿಕೆಯ ರೂಪದಲ್ಲಿ ನಾನಿದ್ದಲ್ಲಿಗೇ ಬಂದು ಬಿಟ್ಟರು. ಇವರ ಹಿಂದೆ ಗಂಟುಗಳ ದಾರದ ರೂಪದಲ್ಲಿ ಪಂಚಮುಖೀ ಪ್ರಾಣದೇವನು ಕೂಡ ಕುಪ್ಪಳಿಸುತ್ತಾ ಬಂದಿದ್ದಾನೆ! ಏನು ಹೇಳುವುದು ಇವರ ವಾತ್ಸಲ್ಯಕ್ಕೆ?

ಬೇರೆಲ್ಲೋ ಇದ್ದು ಕೀಲಿಮಣೆ ಕುಟ್ಟುವ ಕೆಲಸವನ್ನು ಮಾಡುತ್ತಿದ್ದರೆ ಬರುತ್ತಿದ್ದರೋ ಇಲ್ಲವೊ ತಿಳಿಯದು. ಅಷ್ಟು ದೊಡ್ಡ ಭಕ್ತಿಯಲ್ಲ ನನ್ನದು. ಆದರೆ ನಾನಿರುವ ಸ್ಥಳವು ಬದರಿಕಾಶ್ರಮದಂತೆಯೇ ಶ್ರೀವೇದವ್ಯಾಸದೇವರ ಮತ್ತೊಂದು ಸನ್ನಿಧಿ. ತತ್ವಸಂಶೋಧನ ಸಂಸತ್ತು. ಶ್ರೀವಿದ್ಯಾಮಾನ್ಯತೀರ್ಥರ, ಶ್ರೀವಿದ್ಯಾಧೀಶತೀರ್ಥರು ಪೂಜೆಯ ಮಂದಿರವಿದು. ಇಲ್ಲಿ ಸಾವಿರಾರು ಶಾಸ್ತ್ರ ಗ್ರಂಥಗಳಿವೆ; ನೂರಾರು ಪ್ರಾಚೀನ ತಾಳವಾರಿಗಳಿವೆ; ಸಂಶೋಧನೆ ಮಾಡುವ ವಿದ್ವಾಂಸರಿದ್ದಾರೆ. ಈ ಹಂಸಗಳ ಮಧ್ಯ ಕೊಕ್ಕರೆಯಂತೆ ಇರಲಿಕ್ಕೆ ನನಗೂ ಒಂದು ಕೆಲಸವಿದೆ. ಕಾವಲುಗಾರನೆನ್ನಲು ಅಡ್ಡಿಯಿಲ್ಲ. ಆದರೆ ಈ ಚಿಕ್ಕ ಕೆಲಸದವನ ಮೇಲೆ ಕೂಡ ಶ್ರೀರಾಯರ ಕೃಪೆ ನಡೆದು ಬಂದಿತೆಂದರೆ ಏನು ಹೇಳುವುದು ನಾನು? ವಾಸ್ತವವಾಗಿ ಈ ವೇದವ್ಯಾಸರ ಸನ್ನಿಧಿಗೆ ಅವರು ನಡೆದು ಬಂದದ್ದು. ಅವರು ನಡೆದು ಬರುವಾಗ ಅವರ ನೆರಳು ನನ್ನ ಮೇಲೆ ಬಿದ್ದದ್ದಷ್ಟೇ. ದೊಡ್ಡ ಭಾಗ್ಯವದು ನನಗೆ. ನನ್ನ ಅಪ್ಪ ಅಮ್ಮನ ಪುಣ್ಯಬಲವಿದು ಎಂದಷ್ಟೇ ಹೇಳಬಲ್ಲೆ.

ಬಳ್ಳಾರಿಯಿಂದ ಸಹೃದಯಿ ಆತ್ಮೀಯನಾದ ವಿಜಯವಿಠಲನ ಮೂಲಕ ಶ್ರೀಗುರುಗಳು ಬಂದಿದ್ದು. ಅವನು ಬಂದಿದ್ದು ತನ್ನ ಕೆಲಸಕ್ಕೆ. ಆದರೆ ಶಕ್ತಿಯ ಸಂಚಿಯನ್ನು ಹೊತ್ತು ತಂದಿದ್ದು ನನಗಾಗಿ. ಇವನಿಗೆ ನಾನು ಋಣಿಯಾಗಿದ್ದೇನೆ. ಶ್ರೀಹರಿವಾಯುಗುರುಗಳ ಸಂಪೂರ್ಣ ಕೃಪೆ ಇವನಿಗಾಗಲಿ ಎಂದು ಹಾರೈಸುವೆ.

ಶ್ರೀಗುರುಪೂರ್ಣಿಮೆಯಂದು ಗುರುಗಳ ವೃಂದವೇ ನಡೆದುಬಂದಿತಲ್ಲ! ಇಂದಿನ ದಿನವೇ ಶುಭದಿನವು. ಇಂದಿನ ತಾರೆ, ಲಗ್ನ, ಯೋಗ ಎಲ್ಲವೂ ಶುಭಕರ.

ಯಾರು ಹೇಳಬಲ್ಲರು “ಇವನು ಗುರುಗಳ ನೆರಳಿನಲ್ಲಿಲ್ಲ” ಎಂದು?

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.