ನಾಗಪುರವು ಒಂದು ಭಾಳ ಸೂಪರ್ ಸ್ಪೆಷಲ್ ಊರು. ಸನಾತನರಿಗೆ ಭದ್ರವಾದ ನೆಲೆಯೊದಗಿಸಿದ ಕ್ಷೇತ್ರವಿದು. ರುಗ್ಮಿಣಿಯ ರಾಜ್ಯ; ಶ್ರೀರಾಮದೇವರ ಪಾದಸ್ಪರ್ಷವಾದ ನೆಲೆ. ನೂರಾರು ಕಿಮೀ ಫಾಸಲೆಯಲ್ಲಿ ಎಲ್ಲಿ ನೋಡಿದರೂ ವರಾಹ, ನರಸಿಂಹ, ರಾಮ, ಕೃಷ್ಣರ ಗುಡಿಗಳು!
ನಾಗಪುರದಿಂದ ಸುಮಾರು ಒಂದು ತಾಸಿನ ದೂರದಲ್ಲಿ ಗುಡ್ಡವೊಂದುಂಟು. ರಾಮಟೇಕ್ ಎಂದು ಇದರ ಹೆಸರು. ವನವಾಸದಲ್ಲಿದ್ದಾಗ ಇಲ್ಲಿ ಕೂತು ನಮ್ಮ ರಾಮನು ಆಸ್ತಿಕರಿಗೆಲ್ಲ ಆರಾಮದ ಆಸ್ತಿಯನ್ನು ಕೊಟ್ಟ ಜಾಗವಿದು. ಇಂದಿಗೂ ಕಣಕಣದಲ್ಲೂ ವೈಷ್ಣವಾಚಲ. ಶ್ರೀರಾಮ, ವರಾಹ, ತ್ರಿವಿಕ್ರಮ, ನರಸಿಂಹದೇವರ ಪ್ರಾಚೀನ ಆಲಯಗಳು ಇಲ್ಲಿವೆ. ಬೇರೆಲ್ಲ ಇತಿಹಾಸವನ್ನು ಮತ್ತೊಮ್ಮೆ ಎಂದಾದರೂ ನೋಡೋಣ. ಅದೂ ಬಹಳ ರುಚಿಯಾದ ವಿಷಯ. ಇವತ್ತು ನಮ್ಮ ಗರ್ಜಿಸುವ ದೇವರ ಹಬ್ಬ. ಸಧ್ಯಕ್ಕೆ ಇವತ್ತು ಇಲ್ಲಿರುವ ಅವನ ಬಗ್ಗೆ ಒಂದು ಸ್ವಾರಸ್ಯವನ್ನು ಹಂಚಿಕೊಳ್ಳುವೆ.
ಒಂದೇ ಪ್ರಾಕಾರದಲ್ಲಿ ಎರಡು ನರಸಿಂಹಾಲಯಗಳು
ರಾಮಟೇಕದ ಒಂದೇ ಪ್ರಾಕಾರದಲ್ಲಿ ಎರಡು ನರಸಿಂಹಾಲಯಗಳಿವೆ. ಇದೇ ಒಂದು ಅಪರೂಪದ ವಿಷಯ. ಎರಡೂ ಕಟ್ಟಡಗಳು ಒಂದೇ ರೀತಿಯವು. ನರಸಿಂಹ ದೇವರ ಶಿಲ್ಪಗಳ ಮುಖಮುದ್ರೆ, ಮುಖಗಳಲ್ಲಿ ಇರುವ ಭಾವ, ಕುಳಿತ ಭಂಗಿ ಎಲ್ಲವೂ ಒಂದೇ ರೀತಿಯವು.
ರಾಜಲೀಲಾಸನ
ಪಂಚಾಯತಿಯನ್ನು ಮಾಡಲು ಆರಾಮವಾಗಿ ಕುಳಿತಿರುವ ಹಿರಿಯ ಯಜಮಾನನ ಹಾಗೆ ಶ್ರೀನರಸಿಂಹದೇವರ ಭಂಗಿಯು ಇದೆ. ಇದನ್ನು ರಾಜಲೀಲಾಸನ ಎಂದು ಹಿರಿಯರು ಕರೆದಿದ್ದಾರೆ. ಈ ಆಸನದ ಹೆಸರೇ ಎಷ್ಟು ಮುದ್ದಾಗಿದೆಯಲ್ಲವೇ? ಇಷ್ಟು ಅಧಿಕಾರಯುತವಾಗಿ ಈ ಸ್ವರಾಟನಲ್ಲದೆ ಇನ್ಯಾರು ಕೂಡಲು ಸಾಧ್ಯ? ಎಡತೊಡೆಯನ್ನು ನೆಲಕ್ಕೆ ಇರಿಸಿ, ಬಲಗಾಲಿನ ಪಾದವನ್ನು ನೆಲಕ್ಕೆ ಊರಿ, ಅದರ ಮಂಡಿಯ ಮೇಲೆ ತನ್ನ ಕೈಯನ್ನಿರಿಸಿದ್ದಾನೆ. ಇಳಿಬಿಟ್ಟ ಕೈಯಲ್ಲಿ ಚಕ್ರವು ರೆಡಿಯಾಗಿ ಕೂತಿದೆ. ಹರಟೆ ಮಾಡುವವರ ತಲೆಯನ್ನು ತೆಗೆದು ಹಾಕಲು. ಹೀಗೆ ಪ್ರಯೋಗಕ್ಕೆ ಸಿದ್ಧವಾದ ಚಕ್ರವನ್ನು ಹಿಡಿದಿರುವುದರಿಂದ ಪ್ರಯೋಗಚಕ್ರವೆಂದೇ ಇದಕ್ಕೆ ಹೆಸರು.
ಸಕ್ಕರೆಯೊಂದೇ, ಮಿಠಾಯಿಗಳು ಬೇರೆ ಬೇರೆ
ಈ ಎರಡೂ ಶಿಲ್ಪಗಳು ಒಂದೇ ಗಾತ್ರ ಮತ್ತು ಮುಖಮುದ್ರೆಯಲ್ಲಿವೆ ಅಂದೆನಲ್ಲವೇ? ಆದರೆ ದರ್ಶನ ಮಾಡಿದಾಗ ಉಂಟಾಗುವ ಅನುಭೂತಿಗಳು ಮಾತ್ರ ವಿಭಿನ್ನವಾಗಿವೆ. ನಿಜಕ್ಕೂ ಸೋಜಿಗವಿದು. ಒಬ್ಬನ ಮನೆಯಲ್ಲಿ ಉಗ್ರತೆಯ ಲಹರಿಗಳೂ ಇನ್ನೊಬ್ಬನ ಮನೆಯಲ್ಲಿ ಪ್ರಶಾಂತತೆಯ ಅಲೆಗಳೂ ನಮ್ಮ ಅಂತರಾಳವನ್ನು ತಾಕುತ್ತವೆ. ಅಂತೆಯೇ ಮೊದಲಿನವನ ಹೆಸರು ರುದ್ರನರಸಿಂಹ, ಎರಡನೆಯವನ ಹೆಸರು ಕೇವಲನಾರಸಿಂಹ.
ಹಿರಣ್ಯಕಶಿಪುವನ್ನು ಸೀಳಿದ ನರಸಿಂಹನನ್ನು ನೋಡಲು ದೇವತೆಗಳೇ ಅಂಜಿದರೆಂದ ಮೇಲೆ, ಮಾನವರು ಮುಟ್ಟಲಾದೀತೇ? ರುದ್ರರೂಪದವನ್ನು ಪೂಜಿಸುವಾಗ ಆ ತಾಪವನ್ನು ತಡೆಯಲಾಗದೋ ಏನೋ ಇಲ್ಲಿ ಪ್ರತಿನಿತ್ಯ ಡೀಟೇಲ್ ಆಗಿರುವ ಪೂಜೆಯಿಲ್ಲ. ಆದರೆ ಭಯಂಕರರೂಪದಲ್ಲಿದ್ದರೂ ಭಕ್ತಿಯುಕ್ತರಿಗೆ ನಾನು ಸುಲಭನು ಎಂದು ಪ್ರಹ್ಲಾದನ ಮೂಲಕ ನರಸಿಂಹದೇವರೇ ತೋರಿಸಿಕೊಟ್ಟಿದ್ದೂ ಉಂಟಲ್ಲ! ಅದುವೇ ಇಲ್ಲಿ ಕೇವಲನರಸಿಂಹನ ಸನ್ನಿಧಿಯಿಂದ ನಮಗೆ ಕಾಣಬರುತ್ತದೆ. ಈ ಗುಡಿಯಲ್ಲಿ ನರಸಿಂಹದೇವರ ತಂಪನ್ನು ಭಕ್ತರು ಅನುಭವಿಸುತ್ತಾರೆ. ಹೀಗಾಗಿ ಇಲ್ಲಿ ದೇವರ ಮೇಲೆ ಹೂಹಾರಗಳೂ, ಮುಂದೆ ಅಗರು, ತೀರ್ಥಾದಿಗಳ ಘಮಲೂ ಕಾಣಸಿಗುತ್ತವೆ.
ನರಸಿಂಹದೇವರು ಕಶಿಪುವಿಗೆ ಧ್ವಾಂತದಿವಾಕರನು – ಖುಷಿಯವನಿಗೆ ಸುಖಶಕ್ತಿಪಯೋನಿಧಿಯು. ಹಿರಣ್ಯಕಶಿಪುವನ್ನು ಅಂಜಿಸಿದ ಸಿಂಹವೇ ಪ್ರಹ್ಲಾದನನ್ನು ಅಪ್ಪಿಕೊಂಡಿತು. ಭಯಕೃತ್-ಭಯನಾಶನಃ, ಸುಲಭೋ ಭಕ್ತಿಯುಕ್ತಾನಾಂ ದುರ್ದರ್ಶೋ ದುಷ್ಟಚೇತಸಾಂ ಎಂಬ ಅನೇಕ ಪ್ರಮೇಯಗಳ ಅನುಸಂಧಾನದೊಂದಿಗೆ ನೋಡಬಹುದಾದ ಕ್ಷೇತ್ರ ಈ ರಾಮಟೇಕ ಪರ್ವತ.
ಸ್ವಾಮೀ ನಾವು ಸನಾತನಿಗಳು. ಕೃತಜ್ಞತೆ ಎನ್ನುವುದು ನಮ್ಮ ಲಕ್ಷಣ.
ಈ ನರಸಿಂಹದೇಗುಲಗಳನ್ನು ಕಟ್ಟಿಸಿದ್ದು ವಾಕಾಟಕರ ರಾಣಿ ಪ್ರಭಾವತಿ ಗುಪ್ತ. ಇವಳು ವಾಕಾಟಕ ರಾಜಮನೆತನದ ಸೊಸೆ. ಹೆಸರಿಗೆ ತಕ್ಕಂತೆ ಪ್ರಭಾವಶಾಲಿನಿ. ಈಕೆ ಯಾರ ಮಗಳು ಗೊತ್ತೋ? ವಿಕ್ರಮಾದಿತ್ಯ, ಪರಮಭಾಗವತ, ರಾಜರ್ಷಿ ಎಂದೆಲ್ಲ ಬಿರುದುಪಡೆದ ಎರಡನೆಯ ಚಂದ್ರಗುಪ್ತನ ಮಗಳು. ಅಪ್ಪನಂತೆ ಮಗಳು. ಗುಪ್ತರು ವೈಷ್ಣವರು ಎನ್ನುವದು ಉಜ್ವಲ ಸತ್ಯ. ಅವರ ಮಗಳಿಂದ ವೈಷ್ಣವರಿಗೊಂದು ಅಪರೂಪದ ಮಂದಿರ ದೊರಕಿತು. ನಾವು ಕೃತಜ್ಞರಾಗಿರಬೇಡವೇ?
Be First to Comment