ಮಧ್ವರ ಉನ್ನತ ಪ್ರತಿಮೆ

​ಕೇವಲ ಮಾಧ್ವರೇಕೆ? ಇಡೀ ವೇದಾಂತಿಗಳ ಪ್ರಪಂಚವೇ ಹೆಮ್ಮೆ ಪಡುವಂತಹ ಕಾರ್ಯಕ್ರಮವಿದು, ಮಧ್ವರ ಮಹೋನ್ನತ ಪ್ರತಿಮೆಯ ಪ್ರತಿಷ್ಠಾಪನೆ.

ಜಗತ್ತಿನ ಅನೇಕ ದೇಶಗಳು ತಮ್ಮಲ್ಲಿ ಆಗಿ ಹೋದ ದಾರ್ಶನಿಕರ ಪ್ರತಿಮೆಗಳನ್ನು ತಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿ ನಿಲ್ಲಿಸಿಕೊಂಡಿದ್ದಾರೆ.  ಪಾಶ್ಚಾತ್ಯ ದೇಶಗಳಲ್ಲಿ ಕೊಪರ್ನಿಕಸ್, ಹೆರೋಡೋಟಸ್, ಅರಿಸ್ಟಾಟಲ್ ಮೊದಲಾದ ದಾರ್ಶನಿಕರ ಮಾತು ಇರಲಿ, ನಮ್ಮ ದೇಶವನ್ನು ಕೊಳ್ಳೆಹೊಡೆದುಕೊಂಡು ಹೋದ  ಬಾರ್ಥುಲೋಮ್ಯು ಡಯಾಸ, ಅಲೆಕ್ಸಾಂಡರನಂತಹ ದುರಾಕ್ರಮಣಕಾರೀ ರಾಜರುಗಳ ಪ್ರತಿಮೆ, ತಮ್ಮದೇ ದೇಶವು ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಾ ಎಂಜಾಯ್ ಮಾಡುತ್ತಿದ್ದ ನೀರೋನಂತಹವರನ್ನು ಸಹ ತಮ್ಮ ಹೆಮ್ಮೆಯ ಗುರುತಿಗಾಗಿ ಬೃಹದಾಕಾರದ ಮೂರ್ತಿಗಳನ್ನು ಮಾಡಿ ನಿಲ್ಲಿಸಿಕೊಂಡಿದ್ದಾರೆ.  ಇನ್ನು ನಮ್ಮ ದೇಶದ ವಿಷಯಕ್ಕೆ ಬಂದಾಗ ವೈದಿಕರನ್ನು ಅನುಮಾನಿಸುವ ಅಥವಾ  ಅಪಮಾನಿಸುವ ವ್ಯಕ್ತಿಗಳ ಪ್ರತಿಮೆಗಳಿಗೆ ನಮ್ಮಲ್ಲಿ ಮೊದಲ ಜಾಗ. ಜನತೆಯ ಹಣದಲ್ಲಿ ತಮ್ಮ ನೂರಾರು ಪ್ರತಿಮೆಗಳನ್ನು ನಿಲ್ಲಿಸಿಕೊಳ್ಳುವ ಹಂಬಲದ ಮಾಜಿ ಮುಖ್ಯಮಂತ್ರಿಗಳೊಬ್ಬರನ್ನು ಕೂಡ ನಮ್ಮ ದೇಶವು ನೋಡಿದೆ.  ಇನ್ನೊಬ್ಬ ಮಾಜಿಮುಖ್ಯಮಂತ್ರಿಗಳ ಮಗ ತಮ್ಮ ಅಪ್ಪನ ಪ್ರತಿಮೆಯನ್ನು ಜನರ ದುಡ್ಡಿನಲ್ಲಿ ತನ್ನ ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ ಹಾಗು ನಗರದ ಎಲ್ಲ ಬೀದಿಗಳಲ್ಲಿಯೂ ನಿಲ್ಲಿಸುವ ಸಾಹಸ ಮಾಡಿ ಯಶಸ್ವಿಯಾದ.  ಎಲ್ಲ ರೀತಿಯ ಅವಲಕ್ಷಣಗಳುಳ್ಳ ನಟೀಮಣಿಯರಿಗೂ ನಮ್ಮ ದೇಶದಲ್ಲಿ ಪ್ರತಿಮಾಸ್ಥಾನವುಂಟು! ಈ ಎಲ್ಲ ಅಪಸವ್ಯಸಾಚಿಗಳ ಪ್ರತಿಮೆಗಳಿಗೇ ಇಲ್ಲಿ ಮೊದಲ ಸ್ಥಾನ.  ದ್ವಿತೀಯ ಸ್ಥಾನದಲ್ಲಿ ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ, ವಿವೇಕಾನಂದರಂತಹ ಸಾಂಸ್ಕೃತಿಕ ನಾಯಕರುಗಳ ಮೂರ್ತಿಗಳನ್ನು ಮಾಡಿ ನಿಲ್ಲಿಸಿರುವುದನ್ನು ನಾವು ನೋಡಿದ್ದೇವೆ.  ಅಷ್ಟರ ಮಧ್ಯದಲ್ಲಿ ಇಷ್ಟು ಮಾಡಿರುವುದೂ ಕೂಡ ಬಹಳ ಸಂತಸದ ವಿಷಯವೇ ಇದು. ಆದರೆ ಇವರೆಲ್ಲ ಕ್ಷಾತ್ರತೇಜಸ್ಸುಳ್ಳ ವ್ಯಕ್ತಿಗಳಾದರು.  ಪ್ರಪಂಚದ ಇನ್ನಿತರ ಎಲ್ಲ ದೇಶಗಳೂ ನಮ್ಮತ್ತ ತಿರುಗಿನೋಡುವಂತೆ ಮಾಡಿರುವ ದಾರ್ಶನಿಕರ ಭವ್ಯ ಪ್ರತಿಮೆಗಳು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿತಗೊಂಡಿರುವುದನ್ನು ನಾವು ಇದುವರೆಗೆ ನೋಡಿದ್ದೇವೆಯೇ?

ಹೌದಲ್ಲ! ಎಲ್ಲೂ ನೋಡಿಲ್ಲ.

ನಮಗೂ, ಅದ್ವೈತಾಚಾರ್ಯ ಮತ್ತು ವಿಶಿಷ್ಟಾದ್ವೈತಾಚಾರ್ಯರುಗಳಿಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇರಬಹುದು. ಆದರೆ ನಾವು ಭಾರತೀಯ ದರ್ಶನ ಹಾಗು ಶಾಸ್ತ್ರವನ್ನು ಗೌರವಿಸುವ ಪರಂಪರೆಯವರು ಅನ್ನುವುದು  ಉಜ್ವಲಸತ್ಯ. ಈ ದೃಷ್ಟಿಯಿಂದ ನೋಡಿದಾಗ ಶಂಕರರು, ರಾಮಾನುಜರು ಅಥವಾ ಮಧ್ವರು ಈ ಯಾರದೇ ಪ್ರತಿಮೆಯನ್ನು ಸಾರ್ವಜನಿಕವಾಗಿ ಗೌರವಾರ್ಹಸ್ಥಾನದಲ್ಲಿ ಪ್ರತಿಷ್ಠೆ ಮಾಡಿದಾಗ ಅದು ನನಗೆ ಸಂತಸವನ್ನು ಕೊಡುತ್ತದೆ. ಅದನ್ನು ಗೌರವಿಸುವುದನ್ನು ನನ್ನ ಕರ್ತವ್ಯವೆಂದು ನಾನು ತಿಳಿಯುತ್ತೇನೆ.  ನಾವು ವೈದಿಕರು ಅಲ್ಲಲ್ಲಿ ನಮ್ಮ ನಮ್ಮ ಮತಾನುಸಾರವಾಗಿ ನಮ್ಮ ಆಚಾರ್ಯರುಗಳ ಪ್ರತಿಮೆಗಳನ್ನು ನಮ್ಮದೇ ಆದ ಮಠಗಳಲ್ಲಿಯೋ ಮಂದಿರಗಳಲ್ಲಿಯೋ ಪುಟ್ಟದಾಗಿ ಸ್ಥಾಪಿಸಿಕೊಂಡಿರುತ್ತೇವೆಯೇ ಹೊರತು ಸಾರ್ವಜನಿಕರ ದೃಷ್ಟಿಗೆ ಕಾಣುವಂತೆ ಉತ್ತಮ ಸ್ಥಳದಲ್ಲಿ, ಎತ್ತರವಾಗಿ, ಭವ್ಯವಾಗಿ ಪ್ರತಿಷ್ಠಾಪಿಸಿಕೊಂಡಿರುವುದು ಇಲ್ಲಿನವರೆಗೆ ಕಂಡುಬಂದಿಲ್ಲ. ಬೀದಿಗೊಂದರಂತೆ ಪ್ರತಿಷ್ಠೆ ಮಾಡಬೇಕೆಂದೇನೂ ನಾನು ಹೇಳುವುದಿಲ್ಲ. ಆದರೆ ವೈದಿಕಾಚಾರ್ಯರ ಪ್ರತಿಮೆಯೊಂದು ಸಾರ್ವಜನಿಕರ ಲ್ಯಾಂಡ್ ಮಾರ್ಕ್ ಆದಲ್ಲಿ ಅದು ನಮಗೊಂದು ಹೆಮ್ಮೆಯ ಸಂಕೇತ ಎನಿಸಬೇಕಲ್ಲವೆ? ವಿರಳವಾದರೂ ಪರವಾಗಿಲ್ಲ ಉತ್ತಮವಾಗಿದ್ದರೆ ಸಾಕು, ಒಟ್ಟಿನಲ್ಲಿ ವೇದಾಂತಾಗಸದ ನಕ್ಷತ್ರಕ್ಕೊಂದು ವೇದಿಕೆ ಬೇಕೇ ಬೇಕು. ಎಲ್ಲರಿಗೂ ಅವರ ಮಹತ್ವ ತಿಳಿಯಬೇಕು. ಇದು ನನ್ನ ಆಸೆ.

ತತ್ವವಾದವನ್ನು ಜಗತ್ತಿನಮುಂದೆ ವ್ಯವಸ್ಥಿತವಾಗಿ ಪ್ರಸ್ತುತಪಡಿಸಿದ ಆಚಾರ್ಯ ಮಧ್ವರದ್ದು ಭವ್ಯವ್ಯಕ್ತಿತ್ವ. ಅವರ ವ್ಯಕ್ತಿತ್ವದ ಕನ್ನಡಿಯಾಗಿ ಪಾಜಕದ ಬಳಿಯಲ್ಲಿ ೩೨ ಅಡಿಗಳ ಪ್ರತಿಮೆಯ ಪ್ರತಿಷ್ಠಾಪನೆಯಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುವವನಾಗಿ ನನಗೆ ಇದು ಬಹಳ ಸಮಾಧಾನ ತರುವ ವಿಷಯ. ಯೋಚನೆ ಮಾಡಿ, ವೇದನಿಂದಕರೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಇದೊಂದು ಉತ್ತಮ ನಡೆಯಲ್ಲವೇ? ವೈದಿಕರಿಂದಲೂ ಸಂಗ್ರಹಿಸಿದ ಟ್ಯಾಕ್ಸಿನಲ್ಲಿ ವೇದನಿಂದಕರ ಮೋಜು ನಡೆಯುತ್ತಿರುವ ದಿನಗಳಿವು. ಹಕ್ಕಿನಿಂದ ಪಡೆಯಬೇಕಾದ ಸಂಗತಿಗಳಿಗೂ ಸೊಕ್ಕಿದವರ ಮುಂದೆ ಬಿಕ್ಕುವ ಪರಿಸ್ಥಿತಿಯಲ್ಲಿ ನಾವು ಬಂದುಬಿಟ್ಟಿದ್ದೇವೆ. ಇಂತಹ ಕಾಲಮಾನದಲ್ಲಿ ಪಲಿಮಾರು ಶ್ರೀಗಳು ಒಂದು ಧೈರ್ಯದ ಕೆಲಸವನ್ನೇ ಮಾಡಿದ್ದಾರೆ.  ಇದು ನಮಗೂ ಹೆಮ್ಮೆಯಲ್ಲವೇನು?

ಪ್ರತಿಮೆಗಾಗಿ ಶಿಲೆಯನ್ನು ತರಿಸಿದ್ದು ದೊಡ್ಡಬಳ್ಳಾಪುರದ ಗ್ರಾನೈಟಿನ ಪರ್ವತದಿಂದ. ಅಲ್ಲಿಂದ ದೈತ್ಯಾಕಾರದ ಲಾರಿಯಲ್ಲಿ ಇಲ್ಲಿಯವರೆಗೆ ತಂದು ಪ್ರತಿಮೆಯನ್ನು ಕೆತ್ತಿಸಲಾಗಿದೆ.  ಹೊಯ್ಸಳ ಶೈಲಿ, ಚಾಲುಕ್ಯ ಶೈಲಿ, ನಾಗರ ಶೈಲಿ, ದ್ರಾವಿಡ ಶೈಲಿ ಎಂದೆಲ್ಲ ವಿವಿಧ ಪ್ರಾಂತ್ಯಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯವಿರುವುದು ಶಿಲ್ಪಕಲೆಯನ್ನು ಆನಂದಿಸುವವರಿಗೆ ಗೊತ್ತಿರುತ್ತದೆ. ಯಾವುದಾದರೂ ಒಂದು ಶೈಲಿಯನ್ನು ಅನುಸರಿಸಿ ದೇಗುಲ ಅಥವಾ ಮೂರ್ತಿಯ ನಿರ್ಮಾಣ ಮಾಡುವುದು ಸಹಜವಾಗಿ ಕಂಡು ಬರುತ್ತದೆ. ಆದರೆ ಅಪರೂಪಕ್ಕೊಮ್ಮೆ ಎರಡು ವಿಭಿನ್ನ ಶೈಲಿಗಳನ್ನು ಒಂದೆಡೆ ಸೇರಿಸಿ ಪ್ರತಿಮಾ ನಿರ್ಮಾಣ ಮಾಡುವುದೂ ಉಂಟು. ಅಂತಹ ಒಂದು ಅಪರೂಪಕ್ಕೆ ನಮ್ಮ ಈ ಮಧ್ವರ ಪ್ರತಿಮೆಯು ಉದಾಹರಣೆಯಾಗಿದೆ. ಇಲ್ಲಿ ಹೊಯ್ಸಳ ಹಾಗು ಚೋಲ ಇಬ್ಬರ ಶೈಲಿಯನ್ನು ಅನುಸರಿಸಲಾಗಿದೆ. (ಶತ ಶತಮಾನಗಳ ಕಾಲ ಪರಸ್ಪರ ಹೊಡೆದಾಡಿದ ಚೋಳರು ಹಾಗು ಹೊಯ್ಸಳರು ಒಟ್ಟಾಗಿ ಸೇರಿದ್ದು ಪ್ರಾಯಶಃ ಇಲ್ಲಿ ಮಾತ್ರವೆಂದೆನಿಸುತ್ತದೆ.) ಪ್ರತಿಮೆಯ ನಿರ್ಮಾಣಕ್ಕೆ ಸಂಬಂಧ ಪಟ್ಟ ಒಂದು ಪುಟ್ಟ FAQ ಪಲಿಮಾರು ಮಠದ ವೆಬ್ ಸೈಟಿನಲ್ಲಿಯೆ ಪ್ರಕಟವಾಗಿದೆ. ಆದ್ದರಿಂದ ಇನ್ನಿತರ ವಿಷಯಗಳ ಚರ್ಚೆಯನ್ನು ನಾನಿಲ್ಲಿ ಮಾಡುವುದಿಲ್ಲ.  ನನ್ನದೇನಿದ್ದರೂ ಪ್ರತಿಮೆ ಹಾಗು ಅದರ ವೈಶಿಷ್ಟ್ಯಗಳನ್ನು ನೋಡಿ ಆನಂದಿಸುವುದಷ್ಟೇ. ಆಸಕ್ತಿಯುಳ್ಳ ಹೃದಯವಂತರೊಂದಿಗೆ ಇದನ್ನ ಹಂಚಿಕೊಂಡರೆ ಮತ್ತೊಂದಿಷ್ಟು ಆನಂದವಾಗುವುದು 🙂

ವಿಗ್ರಹ ನಿರ್ಮಾಣದ ಹಿಂದೆ ಶ್ರೀಗಳವರ ಮನೋಬಲ ಅಪಾರವಾಗಿ ಕೆಲಸಮಾಡಿದೆ. ಇದರ ಬೆಂಬಲದೊಂದಿಗೆ ಈ ಪ್ರತಿಮೆಯನ್ನು ಇಷ್ಟರ ಮಟ್ಟಿಗೆ ತಂದು ನಿಲ್ಲಿಸಿರುವುದರ ಹಿಂದೆ ಅನೇಕ ಜನರ ಪರಿಶ್ರಮವಿದೆ.  ನಮ್ಮ ಪೀಳಿಗೆಯು ಕಂಡಿರುವಂತಹ ಕೆಲವು ಉತ್ತಮ ವರ್ಣಚಿತ್ರ ಕಲಾವಿದರಲ್ಲಿ ಕೆ.ಎಂ ಶೇಷಗಿರಿಯವರು ಒಬ್ಬರು. ಈತ ಅಭಿಜಾತ ಕಲಾವಿದರು. ಜೊತೆಗೆ ಮಧ್ವಶಾಸ್ತ್ರವನ್ನು ಕೂಡ ಅಧ್ಯಯನ ಮಾಡುತ್ತಿರುವುದು ನನಗೆ ಇವರ ಮೇಲೆ ಇರುವ ಗೌರವ ಹೆಚ್ಚುವಂತೆ ಆಗಿದೆ. ಶಾಸ್ತ್ರದ ತಿಳುವಳಿಕೆಯೂ ಜೊತೆಗೆ ಇರುವುದರಿಂದ ಇವರು ರಚಿಸಿರುವ ಚಿತ್ರಗಳು ಹೆಚ್ಚಿನ ತೂಕದಿಂದ ಕೂಡಿರುತ್ತವೆ . ಇವರು ರಚಿಸಿರುವ ಸವಿತೃಮಂಡಲಮಧ್ಯವರ್ತಿನಾರಾಯಣನ ಭಾವಚಿತ್ರವೇ ಇಂದಿಗೂ ನನ್ನ ಧ್ಯಾನಕ್ಕೆ ಸಹಾಯಕವಾಗಿರುವುದು. ಈ ಮಧ್ವರ ಪ್ರತಿಮೆಯ ಮೂಲರೂಪುರೇಷೆಗಳು, ನಿರ್ಮಾಣದ ಪ್ರತಿ ಹಂತದ ಮೇಲ್ವಿಚಾರಣೆ ಎಲ್ಲವೂ ಕೂಡ ಇವರದೇ.

ಕಲ್ಲನ್ನು ಪ್ರತಿಮೆಯನ್ನಾಗಿ ಮಾಡಿದ್ದು ಪ್ರಸಿದ್ಧ ಶಿಲ್ಪಿಗಳಾದ ಅಶೋಕ ಗುಡಿಗಾರ ಮತ್ತು ಅವರ ಸಂಗಡಿಗರು.  ಮಲಗಿದ್ದ ಮೂರ್ತಿಯನ್ನು ಎದ್ದು ನಿಲ್ಲಿಸಿ, ಪೀಠದಮೇಲೆ ಕೂರಿಸಿದ್ದು ಎಲ್ ಅಂಡ್ ಟಿ ಕಂಪನಿಯ ತಜ್ಞರು. ಇದಕ್ಕಿಂತಲೂ ದೊಡ್ಡದಾದ ಅನೇಕ ಕಾರ್ಯಗಳನ್ನು ಸಾಧಿಸಿದ ಅನುಭವಿಗಳು.  ಒಂದು ಹಂತದಲ್ಲಿ ಪ್ರಧಾನ ಇಂಜಿನಿಯರರು ಪ್ರತಿಮೆಗೇನಾದರೂ ಹಾನಿಯಾಗಿಬಿಟ್ಟರೆ ಎಂದು ವ್ಯಾಕುಲರಾದರು. ಅದನ್ನು ಗಮನಿಸಿದ ಪಂಜಾಬಿನ ಸಿಖ್ ಪಂಥದ ಒಬ್ಬ ಸುಪರ್ವೈಸರು ತಕ್ಷಣ ಅವರ ಬಳಿ ಬಂದು ಹೇಳಿದ್ದು ಇಷ್ಟು “ಸರ್ ಆಪ್ ಬೇಫಿಕ್ರ್ ರಹೋ, ಇಸಕೊ ಹಮ್ ಮೂರ್ತಿ ನಹಿ ಮಾನತೆ, ಯೇ ರಿಯಲ್ ಮೆ ಹಮಾರಾ ಗುರು ಹೈ. ಇನಕೋ ಹಿ ಹಮ್ ಲೋಗ್ ಉಪರ್ ಬಿಠಾ ರಹೇ ಹೈ, ಇನ್ ಕೋ ಕುಛ್ ಹುವಾ ತೋ ಮೇರೇ ಬೇಟೆ ಕಿ ಕಸಮ್” (ಸರ್ ನೀವು ಚಿಂತಿಸಬೇಡಿ, ಇದನ್ನು ನಾವು ಮೂರ್ತಿ ಎಂದು ತಿಳಿದಿಲ್ಲ, ಜೀವಸಹಿತರಾದ ನಮ್ಮ ಗುರುಗಳನ್ನೇ ನಾವು ಎತ್ತಿ ಕೂರಿಸುತ್ತಿದ್ದೇವೆ, ಒಂದು ವೇಳೆ ಇವರಿಗೆ ಏನಾದರೂ ಆದರ ನನ್ನ ಮಗನ ಮೇಲೆ ಆಣೆ”) ಈ ಮಾತನ್ನು ಕೇಳಿ ಆ ತಜ್ಞರ ಕಣ್ಣಲ್ಲಿ ಕೂಡ ನೀರು ಹನಿಯಿತು. ಹೀಗೆ ದೈವಿಕವಾದ ಮಧ್ವಶಕ್ತಿಯು ಅವರನ್ನೆಲ್ಲ ಒಟ್ಟುಗೂಡಿಸಿ ಕೆಲಸಮಾಡಿತು. ಒಟ್ಟು ೩೨ ಜನರು ಬಹಳ ಜತನವಾಗಿ ಈ ಕೆಲಸವನ್ನು ಸಾಧಿಸಿದರು.

ಇವರೆಲ್ಲರಿಗೆ ಮಧ್ಯ ಪಿ.ಆರ್ ಪ್ರಹ್ಲಾದ ಅವರ ಶಿಸ್ತುಬದ್ಧವಾದ ಪರಿಶ್ರಮವು ಕೂಡ ಗಮನೀಯವಾಗಿದೆ. ಹಗಲು ರಾತ್ರಿ ಈ ಎಲ್ಲರ ಮಧ್ಯ ನಿಂತು ಇವರು ಶ್ರೀಗಳವರ ಕಾರ್ಯಕ್ಕೆ ಕೈಗೂಡಿಸಿದ್ದಾರೆ.  ಹೊಗಳುವ ಉದ್ದೇಶದಿಂದ ನಾನು ಇದನ್ನು ಬರೆದಿಲ್ಲ. ಈ ಎಲ್ಲರೂ ನನ್ನ ಅಭಿಪ್ರಾಯದಲ್ಲಿ ಬಹಳ ಧನ್ಯಜೀವರು. ಹಿಂದಿನ ಜನ್ಮಗಳ ಪುಣ್ಯವಿದ್ದಾಗ ಮಾತ್ರ ಇಂತಹ ಒಂದು ಅಮೋಘಕಾರ್ಯದಲ್ಲಿ ನೇರವಾಗಿ ಭಾಗಿಯಾಗಲು ಸಾಧ್ಯವೆಂಬ ನನ್ನ ದೃಢ ಅಭಿಪ್ರಾಯವನ್ನು ಇಲ್ಲಿ ವ್ಯಕ್ತ ಮಾಡಿದ್ದೇನೆ.

ಈ ಮಧ್ವಪ್ರತಿಷ್ಠೆಯ ವಿಷಯದಲ್ಲಿ ನಮ್ಮವರೇ ಕೆಲವರದ್ದು ತಲೆಪ್ರತಿಷ್ಠೆಯ ಸ್ವರ ಕೇಳಿ ಬಂದಿರುವುದು ಉಂಟು.  “ಇಷ್ಟು ಎತ್ತರದ ಮೂರ್ತಿ ಬೇಕಿತ್ತೇನು?” ಅಂತ. ಅವರಿಗೆ ನಾನು ಶ್ರೀಗಳು ಸ್ಥಾಪಿಸಿದ ಹರಿದ್ವಾರದ ಹನುಮನನ್ನು ನೋಡಲು ಹೇಳುತ್ತೇನೆ. ಅತ್ಯಂತ ಪ್ರತಿಕೂಲವಾದ ಸ್ಥಿತಿಯಲ್ಲಿ ನಡೆದ ಪ್ರತಿಷ್ಠಾಪನೆ ಅದು.  ಆದರೆ ಆಗ ಆ ಹನುಮನ ಪ್ರತಿಷ್ಠಾಪನೆಯ ಹಿಂದೆ ಗುಸುಗುಸು ಮಾತನಾಡಿದ ಜನರೇ ಇಂದು ಅಲ್ಲಿ ಹೋಗಿ ಸಮಾಧಾನಚಿತ್ತದಿಂದ ಊಟ ಮಾಡುತ್ತಿರುವುದು. ಹರಿದ್ವಾರಲ್ಲಿ “ಇದು ನಮ್ಮದು” ಎನ್ನುವ ಒಂದು ಗುರುತು ಸಿಕ್ಕಿರುವುದೇ ಆ ಹನುಮನಿಂದ.  ಆಗ “ಯಾವುದೋ ಒಂದು ಗುಡಿ” ಆಗಿದ್ದ ಜಾಗ ಇಂದು “ಬಡೇ ಹನುಮಾನ್ ಮಂದಿರವಾಗಿ” ಪ್ರಸಿದ್ಧವಾಗಿದೆ.  ಅದರಂತೆಯೇ ಇದೂ ಕೂಡ.

ಈ ಪ್ರತಿಮೆಯನ್ನು ನಮ್ಮ ಅಪ್ಪನದೆಂದು, ಅಣ್ಣನೆಂದು, ಸ್ನೇಹಿತನೆಂದು ಪ್ರೀತಿಸಿ ಆಗ ಎಲ್ಲವೂ ಸರಿಯಾಗಿಯೇ ಕಾಣುತ್ತದೆ.  “ಉಡುಪಿಯ ಸ್ವಾಮಿಗಳು ಪ್ರತಿಷ್ಠಾಪನೆ ಮಾಡಿದ್ದು ನಮ್ಮ ಮಠದ ಸಂಪ್ರದಾಯವಲ್ಲ” ಎನ್ನುತ್ತಾ ಗೊಣಗುವವರು ಗೊಣಗುತ್ತಲೇ ಇರಿ. ಈಗಿನ ನಮ್ಮ ಪೀಳಿಗೆಗೇ ಕುಂಕುಮ ಬಳೆ ಶುಭಕರವಾದ ವಸ್ತ್ರ ಮೊದಲಾದ ಮಂಗಳ ಲಕ್ಷಣಗಳು ಬೇಕಾಗಿಲ್ಲ, ಮುಂದೆ ಅವುಗಳಿಗೆ ತಮ್ಮ ಗುರುಗಳು ಯಾರೆಂಬುದೂ ಮರೆತು ಕಲಬೆರಕೆಯಾಗಿ ಹೋಗುತ್ತವೆ. ಆಗ ಒದ್ದಾಡದಿರಿ. ಮಧ್ವರ ಕೃಪೆ ಬೇಕೋ, ಅಥವಾ ಮಠೀಯ ಪ್ರತಿಷ್ಠೆ ಬೇಕೋ ಬೇಗ ಆಯ್ಕೆ ಮಾಡಿಕೊಳ್ಳಿರಿ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

4 Comments

  1. Aravind
    May 7, 2017
    Reply

    ಆತ್ಮೀಯ ರಘುನಂದನ ಅವರೇ, ಬಹಳ ಒಳ್ಳೆಯ ಲೇಖನ, ಹೌದೂ ದಾರ್ಶನಿಕರ ಈ ರೀತಿಯ ವಿಗ್ರಹದಿಂದ ಅವರ ನಮಗೆ ಮಾಡಿರುವ ಉಪಕಾರ ಸ್ಮರಣೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡುಯುವ ಕೆಲಸವು ಆಗಿದೆ. ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದಂಗಳವರಿಗೆ ಶಿರ ಸಾಸ್ಟ್ರಾಂಗ ನಮಸ್ಕಾರಗಳು

    ಅರವಿಂದ್ ಶ್ರೀನಾಥ್

    • ರಘು
      May 7, 2017
      Reply

      ಲೇಖನದ ಉದ್ದೇಶ ನಿಮಗೆ ಇಷ್ಟವಾಗಿದ್ದು ನನಗೆ ಸಂತಸವನ್ನು ತಂದಿತು.

  2. Nagaraj bhat
    May 7, 2017
    Reply

    Om shree Madhwacharya Namaha…

  3. Nagaraj bhat
    May 7, 2017
    Reply

    Yes good …..Madhwacharya Namaha…

Leave a Reply

This site uses Akismet to reduce spam. Learn how your comment data is processed.