ಮಂದಸ್ಮಿತಮ್ …

ಇಂದಿಗೆ 70 ವರ್ಷಗಳ ಹಿಂದೆ ಮುಗುಳ್ನಗೆಯೊಂದು ಇಳೆಗೆ ಇಳಿಯಿತು. ಅಂತಿಂಥ ನಗುವಲ್ಲ ಅದು. ನಂಬಿದ ನೂರಾರು ಜನರ ಜೀವನದಲ್ಲಿ ಬೆಳಕನ್ನು ಚೆಲ್ಲಿದ ದೈವಿಕ ನಗುವು ಅದು.

ಈ ಮಗುವು ಜನರೆಲ್ಲ ಮುಖದಲ್ಲಿ ಮುಗುಳ್ನಗೆಯನ್ನು ಮೂಡಿಸುತ್ತಾ ನಡೆದಾಡುವುದನ್ನೇ ಮರೆತು ಕೂತಿತಂತೆ. ಜನರೇನೋ ನಲಿಯುತ್ತಿದ್ದರು. ಆದರೆ ತಾಯಿಗೆ ದಿಗಿಲು. ನಡೆಯುವುದೋ ಇಲ್ಲವೋ ಎಂದು. ಕೂಸನ್ನು ಎತ್ತುಕೊಂಡೇ ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಶ್ರೀನಿವಾಸನ ದರ್ಶನಕ್ಕೆ ಹೋಗಿ ಬಂದರು. ಅಲ್ಲಿತ್ತಲ್ಲ ಈ ಮಂದಸ್ಮಿತದ ಮೂಲಸೆಲೆ! ಆ ಮಂದಸ್ಮಿತಮುಖಸರೋರುಹಕಾಂತಿರಮ್ಯನ ದರ್ಶನವಾದ ನಂತರ ಈ ನಗುವು ನಡೆದಾಡಲಾರಂಭಿಸಿತು. ತಿಳಿವಿಲ್ಲದವರಿಗೆ ತಿಳಿವನ್ನು ಕೊಟ್ಟು ಮುನ್ನಡೆಸುವ ತನ್ನ ಕಾರ್ಯಕ್ಕೆ ಮೊದಲಾಯಿತು. ಆ ರಮೆಯ ಸಹಿತನ ಹೆಸರೇ ಈ ಕೂಸಿಗೂ. ರಮೇಶನೆಂದು.

ಈ ಮಂದಹಾಸವೇ ಮುಂದೆ ಸಂನ್ಯಾಸವನ್ನು ಪಡೆದು ಶ್ರೀವಿದ್ಯಾಧೀಶತೀರ್ಥರು ಎಂದಾದರು.

ಶ್ರೀಗಳವರ ಅವತಾರವು ಆದ ದಿನದಿಂದ ಇಂದಿನವರೆಗೆ ಜಗತ್ತಿನಲ್ಲಿ ಏನೇಲ್ಲ ಬದಲಾವಣೆಗಳಾಗಿವೆ. ಆದರೆ ಇವರ ಮಂದಹಾಸದಲ್ಲಿ ಮಾತ್ರ ಏನೂ ಬದಲಾಗಿಲ್ಲ. ಎಂಥಾ ಅವಸರದ ಸಂದರ್ಭದಲ್ಲೂ ಈ ಮುಗುಳ್ನಗೆಯನ್ನು ಮಾಸದು! ಎಷ್ಟಾದರೂ ಸಾತ್ವಿಕತೆ ತುಂಬಿರಬೇಕು ಒಳಚೇತನದಲ್ಲಿ? ಅಲ್ಲವೇ?

2015ರಲ್ಲಿ ಶ್ರೀಗಳವರು 60 ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ ತಿರುಮಲೆಯಲ್ಲಿ ಒಂದು ದೊಡ್ಡ ಕಾರ್ಯಕ್ರಮವು ನಡೆಯಿತು. ಆ ಸಂದರ್ಭದಲ್ಲಿ ಒಂದು ದಿನ ಬೆಳಿಗ್ಗೆ ಶ್ರೀಗಳವರಿಗೆ ಶ್ರೀನಿವಾಸನ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶವು ಇತ್ತು. ಬೆಳಗಿನ ಜಾವ ಮೂರಕ್ಕೆಲ್ಲ ಅಲ್ಲಿ ಹಾಜರಿರಬೇಕು. ಅಂದು ಬೇರೊಂದು ಕೆಲಸಕ್ಕಾಗಿ ನಾನು ಸಹ ಬೇಗ ಎದ್ದೇಳುವ ಭಾಗ್ಯವಿತ್ತು.

ಶ್ರೀಗಳವರು ಎದ್ದು ಸ್ನಾನವನ್ನು ಮುಗಿಸಿದರು. ತ್ವರಿತವಾಗಿ ಅವಕಾಶ ಒದಗಿದಷ್ಟು ಜಪವನ್ನೂ ಮುಗಿಸಿದರು. ಅದಾಗಲೇ 2:45 ಆಗಿ ಹೋಗಿತ್ತು. ತಡವಾಗಿ ಹೋಯಿತೆಂದು ಸಂನ್ಯಾಸದಂಡದೊಂದಿಗೆ ಶ್ರೀಗಳವರು ಶ್ರೀನಿವಾಸನ ಸನ್ನಿಧಿಯತ್ತ ಓಡುತ್ತಲೇ ಹೊರಟರು. ಗುಡಿಯ ಮುಖ್ಯ ಗೇಟಿನವರೆಗೆ ಹೋದರಾಯಿತು ಎಂದು ನಾನೂ ದಾಪುಗಾಲಿಕ್ಕುತ್ತ ಅವರೊಟ್ಟಿಗೆ ನಡೆದೆ. ಓಡುತ್ತಲೇ ಶ್ರೀಗಳವರು ಹೇಳಿದರು. “ಶ್ರೀನಿವಾಸನು ದರ್ಶನದ ವಿಷಯದಲ್ಲಿ ಬಹಳ ಸ್ಟ್ರಿಕ್ಟು. ತಡವಾದರೆ ಗೇಟಿನ ಬೀಗವನ್ನೇ ತೆಗೆಯುವುದಿಲ್ಲ”. ಎಂದು. ಅರ್ಥವಾಯ್ತು ನನಗೆ. ನಾನೂ ಓಡುತ್ತಾ ಮುಂಬರೆದೆ.

ಸ್ವಾಮಿಗಳು ಥಟ್ಟನೆ ಒಂದೆಡೆ ನಿಂತು, ಮಗುವಿನ ನಗೆಯನ್ನು ಚೆಲ್ಲಿ “ಚಿಕ್ಕ ಸಮಸ್ಯೆ ಆಯ್ತಲ್ಲ, ಆಧಾರ್ ಕಾರ್ಡ್ ತರುವುದು ಮರ್ತು ಹೋಯ್ತು”. ಎಂದರು. “ಹೋಗಿ ತಾ” ಎಂದು ಹೇಳಲಿಕ್ಕೂ ಅವರಿಗೆ ಸಂಕೋಚ. “ಸ್ವಾಮಿ ಎಲ್ಲಿದೆ ಎಂದು ಹೇಳಿದರೆ ಹೋಗಿ ತರುವೆ” ಎಂದು. ಪಾಪ ಅದು ಎಲ್ಲಿದೆ ಎಂದು ಅವರಿಗೂ ಮಾಹಿತಿ ಇದ್ದಿಲ್ಲ. ತಾವೇ ತಿರುಗಿ ಮತ್ತೆ ತಮ್ಮ ಕೋಣೆಯತ್ತ ಓಡಿದರು. ಪುಣ್ಯಕ್ಕೆ ಅದು ಬೇಗ ದೊರಕಿ, ಮತ್ತೆ ಓಡುತ್ತಲೇ ಗುಡಿಯತ್ತ ಬಂದರು. ಆದರೂ ೫ ನಿಮಿಷ ಹೆಚ್ಚಾಗಿ ಹೋಗಿತ್ತು. ಗೇಟಿನ ಮುಂದೆ ನಿಂತಾಗ ಅಲ್ಲಿನ ಸಿಬ್ಬಂದಿ ತೀರಾ ಕ್ಷುಲ್ಲಕ ಧ್ವನಿಯಲ್ಲಿ “ಯಾರು? ಏನು ಬೇಕು”? ಎಂದು ಕೇಳಿದ. ಶ್ರೀಗಳವರು ಮಂದಸ್ಮಿತರಾಗಿಯೇ ಉತ್ತರಿಸಿದರು. ಆತ ಒಂದು “ನಿಮಿಷ ನಿಲ್ಲಿ, ಕನ್ಫರ್ಮ್ ಮಾಡಿಕೊಂಡು ಬರ್ತೀನಿ” ಎಂದು ಹೇಳಿ ಒಳಗೆ ಹೋದ. ಮತ್ತೆ ಇಬ್ಬರೊಂದಿಗೆ ಬಂದ. ಬಂದವರಲ್ಲೊಬ್ಬ ಅಧಿಕಾರಿಯು “ಆಧಾರ್ ಕಾರ್ಡ್ ತಂದಿದ್ದೀರೋ ಇಲ್ಲವೋ? ಅದಿಲ್ಲದೆ ಪ್ರವೇಶವಿಲ್ಲ” ಎಂದು ಹೇಳಿದರು. ಧ್ವನಿಯು ಅನಗತ್ಯವಾಗಿ ಬಿರುಸಾಗಿತ್ತು ಎಂದು ಸ್ಪಷ್ಟವಿತ್ತು. ಆದರೂ ಶ್ರೀಗಳು ಮುಗುಳ್ನಗುತ್ತಲೇ ತಮ್ಮ ಆಧಾರ್ ಪತ್ರವನ್ನು ಅವರಿಗೆ ತೋರಿಸಿದರು. ಬೀಗವು ತೆರೆಯಲ್ಪಟ್ಟಿತು.

ದರ್ಶನವನ್ನು ಮುಗಿಸಿಕೊಂಡು ಬಂದ ನಂತರ ಚೂರು ಪುರುಸೊತ್ತಿದ್ದಾಗ ಅವರಿಗೆ ಕೇಳಿದೆ. “ಸ್ವಾಮಿ ನೀವು ಹೀಗೆ ಸಾಮಾನ್ಯರಂತೆ ಧಾವಂತ ಪಟ್ಟು ಓಡುತ್ತಾ ಹೋಗಿದ್ದು, ಅಲ್ಲಿನ ಸಿಬ್ಬಂದಿ ನಿಮ್ಮೊಂದಿಗೆ ನಡೆದುಕೊಂಡಿದ್ದು ನೋಡಿ ಬೇಸರವಾಯ್ತು. ಮೇಲಧಿಕಾರಿಗಳಿಗೆ ನಿಮ್ಮ ಬಗ್ಗೆ ಗೊತ್ತಿದೆಯಲ್ಲ. ಅವರ ಮೂಲಕವೇ ಒಂದು ಮಾತು ಹೇಳಿಸಿದ್ದರೆ ಚೆನ್ನಾಗಿತ್ತಲ್ಲ” ಎಂದು. ಶ್ರೀಗಳವರು ಮುಗುಳ್ನಗೆಯಿಂದಲೇ ಉತ್ತರಿಸಿದರು. “ನಾನು ಸಾಮಾನ್ಯನಾದುದಕ್ಕೇ ಓಡಿ ಹಾಗೆ ಅವಸರದಿಂದ ಓಡಿದ್ದು. ಹಾಗೆ ಓಡಿದ್ದಕ್ಕೇನೇ ಐದು ನಿಮಿಷ ಮೀರಿದ್ದರೂ ದರ್ಶನವು ಸಿಕ್ಕಿದ್ದು. ಇಲ್ಲವಾದರೆ ದಾರಿಯಲ್ಲೇ ನಿಲ್ಲಬೇಕಿತ್ತಷ್ಟೆ. ದೇವರ ದರ್ಶನವೆಂದರೇನೇ ಹಾಗೆ. ಪರೀಕ್ಷೆ ಮಾಡಿಯೇ ಹತ್ತಿರ ಸೇರಿಸಿಕೊಳ್ಳುತ್ತಾನೆ.” ಸನಕಾದಿಗಳಿಗೆ ಅಧಿಕಾರವಿದ್ದರೂ ಸಹ ಜಯವಿಜಯರಿಗೆ ದ್ವಾರಪಾಲಕರೆಂದು ಅವರಿಗೆ ಗೌರವ ಕೊಡಲಿಲ್ಲವೇ? ಇದೂ ಹಾಗೆಯೇ ತಿಳಿಯಬೇಕು. ಸಿಬ್ಬಂದಿಗಳು ತಮ್ಮ ಕೆಲಸವನ್ನು ಮಾಡಿದ್ದಾರೆ. ನನಗೆ ಒಳ್ಳೆಯ ದರ್ಶನವು ಆಯಿತಲ್ಲ. ಇನ್ನೇನು ಬೇಕು” ಎಂದು ಹೇಳಿ ಮುಗುಳ್ನಕ್ಕರು.

ಇದಕ್ಕಿಂತ ಉನ್ನತವಾದ ನಡತೆಯು ಶ್ರೀವಿದ್ಯಾಧೀಶತೀರ್ಥರೆನ್ನುವ ತಪಸ್ವಿಗಳಲ್ಲಿ ಅಲ್ಲದೆ ಇನ್ನಾರಲ್ಲಿ ಕಂಡೀತು?

ಮೇಲ್ನೋಟಕ್ಕೆ ಇದೊಂದು ಸಾಧಾರಣ ಘಟನೆ ಎನಿಸಿಬಿಡುವುದು. ಆದರೆ ಸೂಕ್ಷ್ಮವಾಗಿ ನೋಡಿದರೆ ಶ್ರೀಗಳವರ ಎಂತಹ ಸಂದರ್ಭದಲ್ಲೂ ಆಳವಾಗಿ ಆಲೋಚನೆಯನ್ನು ಮಾಡಿಯೇ ಮುಂದಡಿಯಿಡುತ್ತಾರೆ. ಎಂತಹ ಉನ್ನತವಾದ ಅನುಸಂಧಾನವಿದೆ ಅವರ ನಡೆಗಳಲ್ಲಿ ಎನ್ನುವುದು ಗೋಚರವಾಗುತ್ತದೆ. ಇತರರಾದರೆ ದೇವಾಲಯದ ಅಧಿಕಾರಿಗಳ ಮುಂದೆ ಶಿಫಾರಸು ಮಾಡಿಸುವುದು, ದುಬಾರಿ ಶುಲ್ಕಗಳನ್ನು ತೆರುವುದು ಇತ್ಯಾದಿ ಮಾರ್ಗಗಳ ಮೂಲಕ ತಮ್ಮ ದರ್ಶನಕ್ಕೆ ಏರ್ಪಾಡು ಮಾಡಿಕೊಳ್ಳುತ್ತಾರೆ. ಒಂದು ವೇಳೆ ತಡವಾದರೆ ದರ್ಶನವನ್ನೇ ರದ್ದುಗೊಳಿಸಿಕೊಳ್ಳುವ ಅನೇಕರಿದ್ದಾರೆ. ಆದರೆ ದೊಡ್ಡ ತಪೋಬಲವಿದ್ದರೂ ಕೂಡ ಅದನ್ನು ಬಳಸದೆ ಶ್ರೀನಿವಾಸದೇವರ ಮುಂದೆ ತಾವು ಸಾಮಾನ್ಯರೇ ಎಂದು ತಿಳಿದು ಓಡಿ ಹೋಗಿ ನಿಂತು ದರ್ಶನವನ್ನು ತೆಗೆದುಕೊಳ್ಳುವುದು ಎಂದರೆ ಹೃದಯಸಂಪನ್ನರಿಗೆ ಮಾತ್ರ ಸಾಧ್ಯ. ನಮ್ಮ ಗುರುಗಳು ಅಂತಹ ಅಪರೂಪದವರು.

ಹೀಗೆ ಶ್ರೀಹರಿಯ ಸಂಪೂರ್ಣ ಕೃಪೆಗೆ ಪಾತ್ರರಾದ್ದರಿಂದಲೇ ಅವರ ಮುಗುಳ್ನಗೆಗೆ ನಮ್ಮಂತಹ ಕೆಳಗಿನವರ ವ್ಯಾಕುಲವನ್ನೂ ದೂರಮಾಡುವ ಶಕ್ತಿಯಿದೆ. ದಿವ್ಯ ಔಷಧವಿದು. ನೀವೇನಾದರೂ ದುರ್ದೈವದಿಂದ ಡಿಪ್ರೆಷನ್ನು ಎನ್ನುವ ಸಮಸ್ಯೆಗೆ ಒಳಗಾಗಿದ್ದರೆ, ಬನ್ನಿ ಶ್ರೀಗಳವರ ಮಂತ್ರಾಕ್ಷತೆ ಪಡೆಯಿರಿ. ಖಂಡಿತವಾಗಿಯೂ ನಿಮ್ಮಲ್ಲಿಯೂ ಉಲ್ಲಾಸವು ಚಿಗುರಿಯೇ ಚಿಗುರುತ್ತದೆ.

ಶ್ರೀಗಳವರ ನೆರಳಿನಲ್ಲಿ ಬದುಕುವ ಅವಕಾಶವು ನನಗೆ ದೊರಕಿರುವುದು ನನ್ನ ಹಿರಿಯರು ಮಾಡಿದ ಪುಣ್ಯವೆಂದು ನಾನು ನಂಬಿದ್ದೇನೆ. ಖಚಿತವಾಗಿಯೂ.

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.