ಮಗು ವಿಪರೀತವಾಗಿ ಅಳುತ್ತಿದೆಯೇ?

Read English version of this article here

ಚಿಕ್ಕ ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಅದು ಇಷ್ಟವೇ ಆದ ವಸ್ತು. ಮಗುವಿನ ನಗು, ಅದರ ಮುದ್ದು ಮಾತು, ಮಗುವು ತೋರಿಸುವ ಬುದ್ಧಿವಂತಿಕೆ, ಮಗುವು ಹಟ ಮಾಡಿ ತನಗೆ ಬೇಕಾದ ವಸ್ತುವನ್ನು ತನ್ನ ಕೈಯಲ್ಲಿ ಪಡೆಯುವ ಪರಿ ಎಲ್ಲವೂ ಸಂತಸದಾಯಕವೇ. ಮಗುವಿನ ಹಟವನ್ನು ಸಹ ಬಂದವರೆದುರು ಬಣ್ಣಿಸಬೇಕು, ಅವರು ಕಣ್ಣರಳಿಸಿ ಈ ಬಣ್ಣನೆಯನ್ನು ಕೇಳಬೇಕು ಎಂಬುದು ಹೆತ್ತವರ ತವಕ.  ಈ ಹಟವು ಸ್ವಲ್ಪ ಹೆಚ್ಚಾಯಿತು ಎನಿಸಿದಾಗ ಮಾತ್ರ ಅವರ ಮುಖದಲ್ಲಿ ಚಿಂತೆಯು ಮೂಡತೊಡಗುವುದು, ಅದರಲ್ಲೂ ಹಟವು ಅತಿರೇಕಕ್ಕೆ ಹೋದಾಗ ಹೆತ್ತವಳು ಪಡುವ ಹಿಂಸೆಯ ಆಳವು ಅನುಭವಿಸಿದವರಿಗೆ ಮಾತ್ರವೇ ಗೊತ್ತು. ಆಟ ಆಡುತ್ತಿರುವವರೆಗೂ ಎಲ್ಲವೂ ಚೆನ್ನ. ಆದರೆ ಮಗುವು ತನಗಾಗುತ್ತಿರುವ ಸಮಸ್ಯೆಯನ್ನು ಹೇಳಲಾಗದೆ ಚಿರ್ರೆಂದು ಭುರ್ರೆಂದು ತಾರಕಸ್ವರದಲ್ಲಿ ಅಳುತ್ತಿರುವಾಗ ಎಲ್ಲರಿಗೂ ದುಃಖ!

ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಹಿರಿಯರೇನಾದರೂ ಅಲ್ಲಿದ್ದರೆ ಒಳ್ಳೆಯದು. ಎಲ್ಲರೂ ತಮ್ಮ ತಮ್ಮ ಅನುಭವರತ್ನಾಕರದೊಳಗಿನಿಂದ ಒಂದೊಂದು ರತ್ನವನ್ನು ತೆಗೆದು ಮಗುವಿನ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಗುತ್ತಾರೆ. ಇವರ ಅನುಭವಕ್ಕೆ ಮೀರಿದ ಸಮಸ್ಯೆಯಾದರೆ ಡಾಕ್ಟರ್ ಮಾಮ ಇದ್ದೇ ಇದ್ದಾರೆ. ಆದರೆ ರಾತ್ರಿಯೇನಾದರೂ ಈ ಸಮಸ್ಯೆ ಒದಗಿದಲ್ಲಿ ಅಥವಾ ಡಾಕ್ಟರ್ ಮಾಮನ ಬಳಿಹೋಗಲು ತಕ್ಷಣಕ್ಕೆ ಸಾಧ್ಯವಾಗದಿದ್ದಲ್ಲಿ ಸಹಜವಾಗಿಯೇ ಗಾಬರಿಯಾಗುವುದು. ತಾಳ್ಮೆಗೆಟ್ಟ ಅಸಹಾಯಕ ಗಂಡ ಹೆಂಡಿರಲ್ಲಿ ಪರಸ್ಪರ ದೂಷಣೆಗಳು ಪ್ರಾರಂಭವಾಗುವುವು.

ಜಗಳವಾಡಬೇಡಿ, ಇಲ್ಲಿ ನೋಡಿ 5 ನಿಮಿಷ.

  • ನೀವು ಇತ್ತೀಚೆಗೆ ಜನಿಸಿದ ಮಗುವೊಂದರ ತಂದೆ ತಾಯಿಗಳಾಗಿದ್ದಲ್ಲಿ
  • ನಿಮ್ಮ ಮಗುವು ತನಗೆ ಒದಗಿ ಬರುತ್ತಿರುವ ತೊಂದರೆಗಳ ಬಗ್ಗೆ ವಿವರವಾಗಿ ಹೇಳಲು ಇನ್ನೂ ಅಶಕ್ತವಾಗಿದ್ದಲ್ಲಿ
  • ನಿಮ್ಮ ಸಮೀಪದಲ್ಲಿ ಹಿರಿಯರ ಸಹಾಯ ಲಭ್ಯವಿಲ್ಲದಿದ್ದಲ್ಲಿ
  • ನೀವು ಮಗುವಿಗೆ ಹಾಕಿದ ಔಷಧ ಕೆಲಸ ಮಾಡುತ್ತಿಲ್ಲ ಎಂದು ನಿಮಗೆ ಅನ್ನಿಸಿದಲ್ಲಿ
  • ಮಗುವಿಗೆ ದೃಷ್ಟಿಯಾಗಿದೆ ಆದರೆ ಎಷ್ಟು ಸಲ ದೃಷ್ಟಿ ನಿವಾಳಿಸಿ ತೆಗೆದರೂ ಅಳು ನಿಲ್ಲಿಸುತ್ತಿಲ್ಲ ಎಂದಾಗ
  • ನಿಮ್ಮ ಮಗುವಿಗೆ ಏನಾಗುತ್ತಿದೆ ಎಂದು ನಿಮಗೆ ಅರ್ಥವಾಗದಿದ್ದಲ್ಲಿ
  • ಮಗು ದುಃಸ್ವಪ್ನದಿಂದ ಬೆಚ್ಚುತ್ತಿದೆ (nightmare) ಎಂದಲ್ಲಿ

ಗಾಬರಿ ಪಡಬೇಡಿ. ಇವೆಲ್ಲ ಲೋಕದಲ್ಲಿ ಸಹಜವಾಗಿಯೇ ಕಾಣಿಸುವ ತೊಂದರೆಗಳು.  ಇದಕ್ಕೆ ಪರಿಹಾರವನ್ನು ಸಾಕ್ಷಾತ್ ವೇದವ್ಯಾಸದೇವರೇ ಒದಗಿಸಿದ್ದಾರೆ. ಅವರು ತೋರಿಸಿದ ಉಪಾಯವನ್ನು ಮನಸ್ಸು ಹಾಗು ದೇಹವನ್ನು ಶುಚಿಗೊಳಿಸಿಕೊಂಡು, ವಿಶ್ವಾಸಪೂರ್ವಕವಾಗಿ ಪಾಲಿಸಿರಿ. ಖಂಡಿತವಾಗಿ ನಿಮ್ಮ ಮಗುವಿನೆಡೆಗೆ ಭಗವಂತ ಸಹಾಯಹಸ್ತವನ್ನು ಚಾಚುತ್ತಾನೆ. ಮಗುವಿಗೆ ಬೇಕಾದ ನಿಶ್ಚಿಂತೆಯ ಸೆಲೆಯನ್ನು ಯಾವುದಾದರೂ ಒಂದು ಮಾರ್ಗದಿಂದ ಚಿಮ್ಮಿಸಿಬಿಡುತ್ತಾನೆ. ಮಗು ಹಾಯಾಗಿ ಕ್ಷಣಾರ್ಧದಲ್ಲಿ ನಿದ್ದೆಗೆ ಜಾರಿ, ಬೆಳಿಗ್ಗೆ ಎಂದಿನಂತೆ ತಾನಾಗಿಯೆ ಬಂದು ನಿಷ್ಕಳಂಕ ನಗುವಿನೊಂದಿಗೆ ನಿಮ್ಮನ್ನು ಎಬ್ಬಿಸುವುದು!

ಭಾಗವತದ ಏಳನೆಯ ಸ್ಕಂದವು ಶ್ರೀಕೃಷ್ಣನ ದಿವ್ಯಲೀಲೆಯನ್ನು ವಿವರಿಸುತ್ತದೆ. ದೇವಕಿ ಹಾಗು ವಸುದೇವರಿಂದ ಹುಟ್ಟುವ ಮಗುವು ತನ್ನನ್ನು ಕೊಲ್ಲುವುದು ಎಂದು ತಿಳಿದ ಕಂಸನು ಅವರ ಎಲ್ಲ ಶಿಶುಗಳನ್ನು ಕೊಲ್ಲುವುದು ನಮಗೆಲ್ಲ ತಿಳಿದಿದೆ. ಎಂಟನೆ ಶಿಶುವಾಗಿ ಭಗವಂತನೇ ಧರೆಗಿಳಿದ. ಪೂತನಿಯು ಶ್ರೀಕೃಷ್ಣನನ್ನು
ಕೊಲ್ಲಲು ಹೋಗಿ ತಾನೇ ಹತಳಾಗಿದ್ದು ಸಹ ಎಲ್ಲರಿಗೂ ಗೊತ್ತು. ಶಿಶುರೂಪಿಯಾದ ಕೃಷ್ಣನ ಈ ಅದ್ಭುತಕಾರ್ಯವನ್ನು ನೋಡಿ ಎಂದು ವ್ರಜಕುಲದ ಗೋಪ ಗೋಪಿಯರೆಲ್ಲ ಬೆರಗಾದರು. ಇದು ಸಾಧಾರಣ ಶಿಶುವಲ್ಲ, ವಿಶೇಷವಾದದ್ದು ಎಂದು ಅವರಿಗೆ ಗೊತ್ತಾಯಿತು. ಆದರೂ ಮಾನವ ಸಹಜವಾದ ಸ್ವಭಾವದಿಂದ ಪುಟ್ಟ ಬಾಲನಿಗೆ ಏನೂ ಆಗದಿರಲಿ, ಈ ಬಾಲಗೋಪಾಲನ ಅವಯವಗಳನ್ನು ಭಗವಂತನ ಅಜಾದಿರೂಪಗಳು ಸಂರಕ್ಷಿಸಲಿ ಎಂದು ಪ್ರಾರ್ಥಿಸಿದರು.

ಭಯವನ್ನು ಹುಟ್ಟಿಸಿ ಅದರ ನಾಶವನ್ನೂ ಮಾಡಬಲ್ಲ ವಿಷ್ಣುವೇ ಕೃಷ್ಣನಾಗಿ ಅವತರಿಸಿರುವಾಗ ಗೋಪಿಕೆಯರು ಈ ಸ್ತುತಿಯನ್ನು ಮಾಡುವ ಅವಶ್ಯಕತೆಯಾದರೂ ಏನು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಹೀಗೆ ಸಮಾಧಾನವಿದೆ. ಭಗವಂತನಿಗೆ ಈ ಸ್ತೋತ್ರದಿಂದ ಆಗಬೇಕಾದದ್ದು ಏನೂ ಇಲ್ಲ. ಅವನ ಭಕ್ತರೇ ಲೋಕ ಕಲ್ಯಾಣಕ್ಕಾಗಿ
krishna-gopika2 ಅವನನ್ನು ಸ್ತುತಿಸುವುದು. ವಾಸ್ತವವಾಗಿ ಕೃಷ್ಣನು ಈ ಕಾರ್ಯವನ್ನು ಮಾಡಿದ್ದು ಪೂತನಿಯ ಒಳಗಿದ್ದ ಶಾಪಗ್ರಸ್ತ ಅಪ್ಸರೆ ಊರ್ವಶಿಯ ಶಾಪವಿಮೋಚನೆಗಾಗಿ. ಮೇಲಾಗಿ ಅವನು ಮಾನವರೂಪದಲ್ಲಿ ಅವತಾರ ಮಾಡಿದಾಗ ಮಾನವನ ರೀತಿಯ ನಡುವಳಿಕೆಗಳನ್ನೇ ಅಲ್ಲವೇ ತೋರಬೇಕಾದದ್ದು? ಹಾಗಾಗಿ ಅವನು ಸಾಧಾರಣ ಶಿಶುವಿನ ಹಾಗೆಯೆ ನಟಿಸಿದ. ಅದೂ ಅಲ್ಲದೆ ಅವರೆಲ್ಲರಿಗೂ ಭಗವಂತನ ಸಂಪೂರ್ಣ ಜ್ಞಾನ ಇದ್ದಿಲ್ಲವಾದ್ದರಿಂದ ಇದು ವಿಶಿಷ್ಟವಾದ ಶಿಶುವೇನೋ ಹೌದು ಆದರೆ ಮಾನವ ಶಿಶು ಎನ್ನುವ ಅಭಿಪ್ರಾಯವು ಇತ್ತು. ಹೀಗಾಗಿ ಆ ಅಬೋಧ ವ್ರಜನಿವಾಸಿಗಳು “ಈ ಶಿಶುವನ್ನು ದೇವರು ರಕ್ಷಣೆ ಮಾಡಲಿ” ಎಂದು ಪ್ರಾರ್ಥಿಸಿದರು.

ಒಟ್ಟಿನಲ್ಲಿ ಮಗುವಿನ ಮೇಲಿದ್ದ ಅತಿಶಯವಾದ ಪ್ರೇಮವೇ ಗೋಪಿಕೆಯರಿಂದ ಈ ಸ್ತೋತ್ರವನ್ನು ಮಾಡಿಸಿತು. ಅವರೆಲ್ಲರ ಈ ಪ್ರಾರ್ಥನೆಯೇ ನಮ್ಮ ನಿಮ್ಮ ಮಗುವನ್ನು ಭಯ, ಕೆಟ್ಟ ದೃಷ್ಟಿ, ಕೆಟ್ಟ ಸ್ವಪ್ನ, ದೇಹದ ಅವಯವಗಳ ನೋವುಗಳಿಂದ ಪಾರು ಮಾಡುವ ದಿವ್ಯ ಮಂತ್ರ. ಇದುವೇ ಶ್ರೀವೇದವ್ಯಾಸದೇವರು ನಮಗಾಗಿ ಸಂಗ್ರಹ ಮಾಡಿಕೊಟ್ಟಿರುವ ದಿವ್ಯ ಔಷಧ.

ಈ ಲೇಖನದ ಕೊನೆಗೆ ಈ ಮಂತ್ರವನ್ನು ನನಗೆ ತಿಳಿದ ವಿವಿಧ ಭಾಷೆಗಳಲ್ಲಿ ಕೊಟ್ಟಿದ್ದೇನೆ. ಇದನ್ನು ಮುದ್ರಿಸಿ ಇಟ್ಟುಕೊಂಡಿರಿ. ಪ್ರತಿನಿತ್ಯ ಕೈಕಾಲು ತೊಳೆದು ಕೊಂಡು, ಶುಭ್ರವಸ್ತ್ರವನ್ನು ಧರಿಸಿ ರಾಯರ ಮುಂದೆ ಕುಳಿತು, ಅವರ ಅಂತರ್ಗತರಾದ ಭಾರತೀರಮಣಾಂತರ್ಗತ ಶ್ರೀವಿಷ್ಣುವನ್ನು ಸ್ಮರಿಸುತ್ತಾ ಒಂದು ಬಾರಿಯಾದರೂ ಈ ಮಂತ್ರವನ್ನು ಪಠಿಸಿ. ಪಠಿಸುವಾಗ ಮಗುವನ್ನು ಹತ್ತಿರವೇ ಮಲಗಿಸಿಕೊಳ್ಳಿರಿ. ಮಗುವಿಗೆ ಒದಗಬಹುದಾದ ಪೀಡೆಗಳನ್ನು ಇದು ಖಂಡಿತವಾಗಿ ದೂರ ಮಾಡುತ್ತದೆ.

ನಡುರಾತ್ರಿಯಲ್ಲಿ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿದ್ದು, ಮಗು ಅತೀವ ವೇದನೆಯಿಂದ ಅಳುತ್ತಿರುವಾಗ ಚಿಂತಿಸಬೇಡಿ. ಈ ಮಂತ್ರವನ್ನು ರಾಯರ ಮುಂದೆ ಕುಳಿತು ೩-೪ ಬಾರಿ ಓದಿ. ಆಮೇಲೆ ಡಾಕ್ಟರ್ ಮಾಮನಿಗೆ ಫೋನ್ ಮಾಡಿ. ತುಂಬಾ ಗಾಢನಿದ್ರೆಯಲ್ಲಿರುವ ಡಾಕ್ಟರ್ ಮಾಮನನ್ನು ಸಹ ಈ ಮಂತ್ರ ಎಬ್ಬಿಸಿ ನಿಮ್ಮ ಮನೆಯೆಡೆಗೆ ಕರೆತರುತ್ತದೆ.

ನನಗೆ ಗುರುಗಳಾದ ಶ್ರೀ ಪಡುಬಿದ್ರಿ ಹರಿನಾಥರು ಈ ಮಂತ್ರವನ್ನು ಸ್ಪಷ್ಟವಾಗಿ ಉಚ್ಚಾರಣೆಯೊಂದಿಗೆ ಪಠನ ಮಾಡಿದ್ದಾರೆ. ಅದರ ಧ್ವನಿಮುದ್ರಣವನ್ನು ಸಹ ನಾನು ಡೌನ್ಲೋಡ್ ಮಾಡಲು ಲೇಖನದ ಕೊನೆಗೆ ಕೊಟ್ಟಿದೇನೆ. ಅದು ನಿಮಗೆ ಸಹಾಯವಾಗುವುದು.

 ನೆನಪಿಡಿ, ಭಗವಂತನಿಗೆ ನೀವು ಸಲ್ಲಿಸಬೇಕಾದ ಶುಲ್ಕವೆಂದರೆ ವಿಶ್ವಾಸ ಮಾತ್ರ. ಅದುವೇ ಮಗುವಿಗೆ ಶ್ರೀರಕ್ಷೆ ಕೂಡ.

Download MP3 3 MB

Download PDF 356 KB

ಕೃತಜ್ಞತೆಗಳು ***********************

  1. ಗೋಳಾಡುತ್ತಿರುವ ಮಗುವಿನ ಚಿತ್ರ ಇಲ್ಲಿಂದ ತೆಗೆದುಕೊಂಡದ್ದು
  2. ಕೃಷ್ಣನ ಸುತ್ತಲೂ ಗೋಪಿಕೆಯರು ಕುಳಿತು ಸ್ತೋತ್ರ ಮಾಡುತ್ತಿರುವುದು. ಇಲ್ಲಿದೆ

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

4 Comments

  1. B V Jayaram
    November 14, 2013
    Reply

    Respected Raghunandana Sharma Garu
    With the blessings of our Great Rayaru, I had a humble request to you. Since we are all devotees of Mantralaya Rayaru, all of us are eager to know any thing about him. But for devotees like us in Andhra, Kannada posts are difficult to understand and at the same time, it may be difficult also for you to translate everything in different langauages for the sake of devotees spread across different states. I request you to please keep an English post also along with Kannada language so that many of us will be able to understand. This request I had earlier made in SRS Mutt Website also. Let us all propagate the Greatness of our Rayaru. Regards – B V Jayaram

  2. Ramanan K
    November 14, 2013
    Reply

    Kindly arrange for a translation of this in English language. It will be of great help. Thanks.

  3. mr jayaraman is very very correct.
    November 15, 2013
    Reply

    it will be appreciated if it is english or sanskrit

  4. Jois vasudhendra
    November 16, 2013
    Reply

    it is very good job done it is very help full to us

    thank u so much

    Hari srinivasa

Leave a Reply

This site uses Akismet to reduce spam. Learn how your comment data is processed.