ಅಶ್ವಿನೀದೇವತೆಗಳು ಹುಟ್ಟಿದ್ದು ಹೇಗೆ?

ಸೂರ್ಯನು ನಾವು ಮಾಡುತ್ತಿರುವ ಎಲ್ಲ ಪಾಪ ಹಾಗು ಪುಣ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ವಿಷ್ಣುವಿಗೆ ವರದಿಯನ್ನೊಪ್ಪಿಸುತ್ತಾ ಕರ್ಮಸಾಕ್ಷಿ ಎನಿಸಿಕೊಂಡಿರುವವನು. ಅಂಧಕಾರದಲ್ಲಿ ನಾವು ಬೀಳಬಾರದೆಂದು ನಮಗೆ ಅಗತ್ಯವಾಗಿರುವ ಬೆಳಕನ್ನು ಕೊಡುತ್ತಲೇ ನಮಗೆ ಕ್ಷೇಮ ಎನಿಸುವ ದೂರದಲ್ಲಿ ಇದ್ದಾನೆ. ಯಾಕೆಂದರೆ ನಾವು ಬೆಂದೂ ಹೋಗಬಾರದಲ್ಲ! ಎಷ್ಟು ದೂರವಪ್ಪಾ ಎಂದರೆ ಸುಮಾರು 150 ಮಿಲಿಯನ್ ಕಿಲೋ ಮೀಟರುಗಳಷ್ಟು.

ಇಷ್ಟು ದೂರ ಇದ್ದರೂ ನಾವು ಉಷ್ಣವನ್ನು ತಾಳಲಾರೆವು. ಚಳಿಗಾಲದಲ್ಲೂ ಸೆಕೆ ಸೆಕೆ ಎಂದು ಗೋಳಾಡುವ ಮಂದಿ ನಾವು. ಬೇಸಿಗೆಯ ಮಾತನ್ನು ಕೇಳುವುದೇ ಬೇಡ. ನಮ್ಮ ಯೋಗ್ಯತೆಯು ಅತ್ಯಂತ ಕಡಿಮೆ ಇರುವುದರಿಂದ ಈ ಒಂದು ಒದ್ದಾಟ ಎಂದುಕೊಳ್ಳೋಣ. ಆದರೆ ದೇವತೆಗಳಿಗೂ ಕೂಡ ಇವನ ತಾಪ ತಡೆಯದಾಗಿತ್ತು! ಬೇರೆ ಯಾರೋ ಅಲ್ಲ, ಸೂರ್ಯನ ಹೆಂಡತಿಗೆ ಕೂಡ ಸೂರ್ಯನ ಬಿಸಿಲನ್ನು ಸಹಿಸಲು ಆಗದ ಪರಿಸ್ಥಿತಿ ಬಂದೊದಗಿ ಒಂದು ಸ್ವಾರಸ್ಯಕರವಾದ ಘಟನೆಯು ನಡೆಯಿತು.

ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನಿಗೆ ಚೆಲುವೆಯಾದ ಒಬ್ಬ ಮಗಳಿದ್ದಳು. ಸಂಜ್ಞಾ ಎಂದು ಅವಳ ಹೆಸರು. ಮಹಾತೇಜೋವಂತನಾದ ಸೂರ್ಯನೊಂದಿಗೆ ಆಕೆಯ ಮದುವೆಯಾಗಿತ್ತು. ಮದುವೆಯಾದ ಎಷ್ಟೋ ದಿನಗಳವರೆಗೂ ಸೂರ್ಯನಿಗೆ ಈಗ ಏನಿದೆಯೋ  ಅನೇಕಪಟ್ಟು ಹೆಚ್ಚಿನ ತೇಜಸ್ಸು ಇತ್ತು. ಸಹಜವಾಗಿಯೇ ಶಾಖವೂ ಅಪಾರವಾಗಿತ್ತು. ಈ ಶಾಖದೊಂದಿಗೆ ಹೆಣಗಾಡುತ್ತಲೇ ವರ್ಷಗಳಗಟ್ಟಲೆ ಸಂಜ್ಞಾದೇವಿಯು ಸಂಸಾರ ನಡೆಸಿದಳು. ಈ ದಂಪತಿಗಳಿಗೆ ವೈವಸ್ವತ ಮನು, ಯಮ ಹಾಗು ಯಮಿ ಎನ್ನುವ ಮೂವರು ಮಕ್ಕಳೂ ಆದರು. ವೈವಸ್ವತ ಮನುವು ಸಧ್ಯದಲ್ಲಿ ನಡೆಯುತ್ತಿರವ ಮನ್ವಂತರದ ಅಧಿಪತಿಯಾದ. ಯಮನಿಗೆ ಪಿತೃಲೋಕದ ಅಧಿಪತ್ಯ ಹಾಗು ಯಮಿಗೆ ಜನರ ಪಾಪಗಳನ್ನು ತೊಳೆಯುತ್ತಾ ನದಿಯಾಗಿ ಹರಿಯುವ ಕಾರ್ಯಗಳು ನಿಯುಕ್ತಿಯಾಗಿದ್ದವು. ಈ ಯಮಿಯೆ ಯಮುನಾ ನದಿ.

ಸೂರ್ಯನ ಸಹಜಶಕ್ತಿಯ ಜೊತೆಗೆ ಅವನ ತಪೋಬಲವೂ ಸೇರಿ ಅವನ ತೇಜಸ್ಸು ಹೆಚ್ಚಾಗುತ್ತಲೇ ನಡೆದು ಸಂಜ್ಞೆಗೆ ಇದನ್ನು ತಡೆಯಲಾಗದ ಸ್ಥಿತಿ ಬಂದೊದಗಿತು. ಪತಿಯೊಡನೆ ನೇರವಾಗಿ ಇದನ್ನು ಹೇಳಲಾಗದೆ ಆಕೆಯು ಒಂದು ಉಪಾಯ ಹೂಡಿದಳು. ತನ್ನದೇ ಮತ್ತೊಂದು ಆಕೃತಿಯನ್ನು ನಿರ್ಮಿಸಿ ಅದಕ್ಕೆ ಛಾಯಾದೇವಿ ಎಂದು ಕರೆದಳು. ತನ್ನ ಸ್ವಭಾವಗಳನ್ನೂ ಅವಳಲ್ಲಿ ತುಂಬಿಸಿದಳು. ಗಂಡನನ್ನು ನೋಡಿಕೊಂಡಿರಲು ಅವಳನ್ನು ತನ್ನ ಜಾಗದಲ್ಲಿ ಇರಿಸಿ ತಾನು ತವರು ಮನೆಗೆ ಹೊರಟಳು.

ಹೊರಡುವಾಗ ಯಾವ ಕಾರಣಕ್ಕೂ  ವಾಸ್ತವವು  ರವಿಗೆ ತಿಳಿಯದಂತೆ ನೋಡಿಕೊಳ್ಳಬೇಕೆಂದು ಅಪ್ಪಣೆಯನ್ನೂ ಮಾಡಿದಳು. ಛಾಯೆಯು ಕೂಡ ಒಂದು ನಿಬಂಧನೆಯನ್ನು ಹಾಕಿ ಸಂಜ್ಞೆಯ ಮಾತಿಗೆ ಒಪ್ಪಿಕೊಂಡಳು. “ಎಷ್ಟೇ ಕಾಲವಾದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಇರುತ್ತೇನೆ. ಆದರೆ ಹೊಡೆತ ತಿನ್ನುವ ಹಂತ ಬಂದಾಗ ನಾನು ನಿಜವನ್ನು ಹೇಳಿಬಿಡುತ್ತೇನೆ” ಎಂಬುದೇ ಆ ನಿಬಂಧನೆ. ಅಂತೂ ಚಿಕ್ಕವಳನ್ನು ಒಪ್ಪಿಸಿ ದೊಡ್ಡವಳು ತನ್ನ ತವರು ಮನೆಗೆ ಹೊರಟಳು. ಏಕಾಕಿಯಾಗಿ ಮನೆಗೆ ಬಂದ ಮಗಳನ್ನು ನೋಡಿ ವಿಶ್ವಕರ್ಮನ ಮನಸ್ಸು ಕೆಡುಕನ್ನು ಶಂಕಿಸಿತು. ಮಗಳು ಗಂಡನ ಶಾಖದ ಕಾರಣವನ್ನು ಹೇಳಿದಳು. ಆದರೆ ತಂದೆ ಒಪ್ಪಲಿಲ್ಲ. ಹೀಗೆ ನೀನು ಒಬ್ಬಳೇ ಬಂದಿದ್ದು ತಪ್ಪು.  ವಾಪಸ್ಸು ಹೋಗು, ಇಲ್ಲಿ ನಿನಗೆ ಸ್ಥಳವಿಲ್ಲ ಎಂದ.

ತಂದೆಯ ಮನೆಗೆ ಪ್ರವೇಶವಿಲ್ಲ ತನ್ನ ಮನೆಗೆ ಹೋಗಲಿಚ್ಛೆಯಿಲ್ಲ. ಏನು ಮಾಡುವುದು? ಸೀದಾ ಅದ್ಭುತವಾದ ಮೇರು ಪರ್ವತದ ಕಡೆಗೆ ಹೋಗಿ ಪ್ರಕೃತಿಯ ಮಡಿಲಲ್ಲಿ ಇರುವ ನಿಶ್ಚಯ ಮಾಡಿದಳು.  ಒಬ್ಬಳೇ ಹೆಂಗಸಾಗಿ ಹೇಗೆ ಇರುವುದು ಎಂದು ತಿಳಿದು ಒಂದು ಸುಂದರ ಕುದುರೆಯ ರೂಪಧಾರಣೆ ಮಾಡಿ ವಿಹರಿಸತೊಡಗಿದಳು. ಅಗಾಧವಾದ ಅಗ್ನಿಯುಳ್ಳ ಯಾಗಶಾಲೆಯಿಂದ ಆಹ್ಲಾದಕರವಾದ ತಂಗಾಳಿಯ ಕಡೆಗೆ ಬಂದ ಅನುಭವವಾಗಿ ಆನಂದವಾಯಿತು. ಹೀಗೆ ಅನೇಕ ವರ್ಷಗಳೇ ಕಳೆದವು.

ಇತ್ತ ಸೂರ್ಯನಿಗೆ ಈ ವ್ಯವಸ್ಥೆಯ ಬಗ್ಗೆ ಅರಿವಾಗದೆ ಛಾಯೆಯ ಜೊತೆ ಸಂಸಾರ ನಡೆಸಿದ್ದ. ಈ ಸಂಸಾರದಲ್ಲಿ ಇವರಿಗೆ ಜನಿಸಿದವರು ಸಾವರ್ಣಿ ಎನ್ನುವ ಮನು, ಶನಿದೇವ ಹಾಗು ತಪತೀ ದೇವಿ. ಸಾವರ್ಣಿಯು ಮುಂದಿನ ಸಂವತ್ಸರದ ಅಧಿಪತಿಯಾಗುವನು. ಶನಿದೇವನ ಬಗ್ಗೆ ಎಲ್ಲರಿಗೂ ಗೊತ್ತು. ತಪತೀದೇವಿಯು ನದಿಯಾಗಿ ಪ್ರವಹಿಸಿದಳು.

ತನಗೂ ಸಂತತಿಯಾಗುವವರೆಗೆ ಛಾಯೆಯು ಯಮ, ಯಮಿ ಹಾಗು ವೈವಸ್ವತರಲ್ಲಿ ಪ್ರೇಮದಿಂದ ಇದ್ದಳು. ತನಗೆ ಮಕ್ಕಳಾದ ನಂತರ ಪಕ್ಷಪಾತದ ಧೋರಣೆಯನ್ನು ತಳೆದಳು. ಇದು ಯಮನನ್ನು ಕೆರಳಿಸಿ ಇಬ್ಬರಲ್ಲಿಯೂ ಜಗಳವಾಯಿತು. ಯಮನು ತಾಯಿಯ ಮೇಲೆ ಕೈ ಎತ್ತಿದ. ಆ ಕಲಹವನ್ನು ಬಿಡಿಸಲು ಬಂದಾಗ ಛಾಯೆ ನಿಜವನ್ನು ತಿಳಿಸಿದಳು. ಸೂರ್ಯನಿಗೆ ಕಿಂಚಿತ್ ಅನುಮಾನವಾಗಿ ನಡೆದ ವಿಪರೀತವನ್ನೆಲ್ಲ ಯೋಗಮಾರ್ಗದಿಂದ ಅರ್ಥೈಸಿಕೊಂಡ.  ಹಾಗಾಗಿ ಸಂಜ್ಞಾದೇವಿಯು ಇರುವ ಜಾಗಕ್ಕೆ ತಾನೇ ಗಂಡು ಕುದುರೆಯ ರೂಪವನ್ನು ತಾಳಿ ಹೋದ.  ಪತ್ನಿಯನ್ನು ಕಂಡವನೇ ಹಿಂಭಾಗದಿಂದ ಅವಳನ್ನು ಸಮೀಪಿಸಿದ. ಹೋಗಿದ್ದ ರಭಸ ವಿಪರೀತವಾಗಿತ್ತು. ಆಕೆಯಾದರೋ ಕುದುರೆಯ ರೂಪದಲ್ಲಿಯೇ ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಳ್ಳುತ್ತ ತಪಸ್ಸಿನಲ್ಲಿಯೇ ಮಗ್ನಳಾಗಿದ್ದಳು. ಹಿಂದಿನಿಂದ ರಭಸವಾಗಿ ಬಂದ ಪತಿಯನ್ನು ಗಮನಿಸದೇ ಇತರರನ್ನು ಗದರಿಸಿದಂತೆ ಜೋರಾಗಿ ಕೋಪವನ್ನು ಪ್ರಕಟಿಸಿದಳು. ಆ ಕೋಪದ ಅಲೆಗಳು ಅವಳ ಮೂಗಿನ ಎರಡೂ ಹೊರಳೆಗಳ ಮೂಲಕ ಭರ್ ಭರ್ ಎಂದು ಬಂದವು. ಆ ಅಲೆಗಳ ಮೂಲಕ ಪ್ರಕಟವಾದವರೇ ಇಬ್ಬರು ಅವಳೀಪುತ್ರರು. ನಾಸತ್ಯ ಮತ್ತು ದಸೃ ಎಂದು ಅವರ ಹೆಸರು. ಅಶ್ವರೂಪದಲ್ಲಿದ್ದಾಗ ಪ್ರಕಟವಾದರು ಆದ್ದರಿಂದ ಅಶ್ವಿನೀ ದೇವತೆಗಳು ಎಂದು ಖ್ಯಾತರಾದರು.

ತನ್ನ ಹಿಂದೆ ಬಂದವರು ಬೇರಾರೋ ಅಲ್ಲ ತನ್ನ ಯಜಮಾನನೇ ಆದ ಸೂರ್ಯ ಎಂದು ಸಂಜ್ಞೆಗೆ ಅರ್ಥವಾಗಲು ತಡವಾಗಲಿಲ್ಲ. ಮಹಾಜ್ವಾಲಾಮಯವಾದ ಶರೀರವನ್ನು ತನಗಾಗಿಯೇ ತಂಪುಗೊಳಿಸಿಕೊಂಡು ಬಂದ ಇನಿಯನ ಮೇಲೆ ಸಂಜ್ಞೆಗೆ ಪ್ರೇಮ ತುಂಬಿ ಹರಿಯಿತು. ಅನೇಕ ವರ್ಷಗಳ ಕಾಲ ಅಶ್ವರೂಪದಲ್ಲಿಯೇ ಸಂಸಾರವನ್ನು ನಡೆಸಿದರು. ಅಶ್ವದ ರೂಪದಲ್ಲಿದ್ದಾಗಲೇ ಜನಿಸಿದ ಅಶ್ವಿನೀ ಕುಮಾರರಿಗೆ ದೇವವೈದ್ಯರಾಗಿ ಇರುವ ಕರ್ತ್ಯವವನ್ನು ವಹಿಸಲಾಯಿತು.

ದೇವತೆಗಳಿಗೆ ವೈದ್ಯರೇಕೆ ಎಂದು ಪ್ರಶ್ನೆ ಬರಬಹುದು. ನಿಜ, ಅವರಿಗೆ ಮನುಷ್ಯರಂತೆ ಕಾಯಿಲೆಗಳು ಬರಲಾರವು. ಆದರೆ ದೇವ ಮತ್ತು ಅಸುರರಿಗೆ ಯುದ್ಧಗಳಾದಾಗ ದೇವತೆಗಳನ್ನು ಪುನಶ್ಚೇತನಗೊಳಿಸುವ ಕೆಜ಼್ಜ಼್ಲಸವನ್ನು ಅವರು ಮಾಡುತ್ತಾರೆ. ಮಾತ್ರವಲ್ಲ ಮಂತ್ರಗಳಿಂದ ಆವಾಹಿಸಿ ಪೂಜಿಸಿದಾಗ ಭೂಲೋಕದವರಿಗೂ ಅವರು ಕೃಪೆಯನ್ನು ಮಾಡಬಲ್ಲರು. ಪಾಂಡುರಾಜನ ಎರಡನೆಯ ಹೆಂಡತಿಯು ಇವರನ್ನು ಪ್ರಾರ್ಥಿಸಿಯೇ ಇವರ ಅಂಶವುಳ್ಳ ನಕುಲ ಸಹದೇವರನ್ನು ಪಡೆದಳು. ಉಪನ್ಯುವೆಂಬ ಬಾಲಕನ ತನ್ನ ಗುರುವಿನ ಸಲಹೆಯಂತೆ ಇವರನ್ನು ಪ್ರಾರ್ಥಿಸಿ ಅನುಗ್ರಹವನ್ನು ಪಡೆದ. ಚ್ಯವನ ಎನ್ನುವ ಅತಿವೃದ್ಧ ಮಹರ್ಷಿಗಳಿಗೆ ಪುನಃ ಯೌವನವು ಬಂದು ಒದಗುವಂತೆ ವಿಶೇಷವಾದ ಔಷಧವೊಂದನ್ನು ಅಶ್ವಿನೀದೇವತೆಗಳು ಸಿದ್ಧಪಡಿಸಿಕೊಟ್ಟರು. ಅದುವೇ ಇಂದಿನ ಸುಪ್ರಸಿದ್ಧ ಚ್ಯವನಪ್ರಾಶ.

ಅಶ್ವಿನೀಕುಮಾರರ ಚಿತ್ರ  : http://totreat.blogspot.com/2012/10/ashvins-ayurveda-flying-doctor-family.html

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.